Skip to main content

ಗೀತೆ ಏನನ್ನು ಬೋಧಿಸುತ್ತದೆ..?

ಗೀತೆ ಏನನ್ನು ಬೋಧಿಸುತ್ತದೆ..?ಹಲವರಿಗೆ ಗೊತ್ತೇ ಇಲ್ಲ..!!ಹಲವರಿಗೆ ತಿಳಿದುಕೊಳ್ಳುವ
ಅವಶ್ಯಕತೆಯಿಲ್ಲ..!!ಹಲವರಿಗೆ ಗೀತೆ ಕೇವಲ ಮನುವಾದಿಗಳಿಗಷ್ಟೇ ಸೀಮಿತ..!!ಹಲವರಿಗೆ
ಗೀತೆ ವಿವಾದ..!!ಕೆಲವರಿಗೆ ಸಂಸ್ಕೃತ ಬರುವುದಿಲ್ಲ..!!ಕೆಲವರಿಗೆ ಅರ್ಥವಾಗದ ಕಬ್ಬಿಣದ
ಕಡಲೆ..!!ಹಲವರದು ಗೀತೆ ಆಧ್ಯಾತ್ಮದ ಬಗ್ಗೆ ಆಸಕ್ತಿಯಿರುವವರಿಗೆ ಮಾತ್ರ ಎಂಬ
ಭಾವನೆ..!!ಹಾಗಾಗಿ ಗೀತೆಗೆ ಇಂದಿಗೂ ಜನಮನ್ನಣೆ ಸಿಕ್ಕಿಲ್ಲ.ಗೀತೆಯನ್ನು ಆಳವಾಗಿ
ಅಧ್ಯಯನ ಮಾಡುವವರಿಲ್ಲ.ಸಕಲ ಶಾಸ್ತ್ರದ ಸಾರವಾಗಿರುವ ಗೀತೆ ಇಂದಿಗೂ ಹಲವರಿಗೆ
ಅಸ್ಪೃಶ್ಯ..!!

ಗೀತೆ ಕೇವಲ ಆಧ್ಯಾತ್ಮಕ್ಕಷ್ಟೇ ಸೀಮಿತವೇ..?ಖಂಡಿತ ಅಲ್ಲ.ಬದುಕಿನ ಎಲ್ಲ ವಿಷಯಗಳನ್ನೂ
ಒಳಗೊಂಡಿರುವ ಗೀತೆ ಒಂದು ಆಚಾರಸಂಹಿತೆ.ಮನುಷ್ಯನ ಬದುಕು ಹೇಗಿರಬೇಕೆಂದು ತಿಳಿಸುವ
ಕೈಪಿಡಿ.ಗೀತೆಯನ್ನು ಸರಿಯಾಗಿ ಓದಿ ಅರ್ಥಮಾಡಿಕೊಂಡು ಗೀತೆಯ ತತ್ವವನ್ನು ಬದುಕಿನಲ್ಲಿ
ಅನುಸರಿಸಿದರೆ ಆ ವ್ಯಕ್ತಿಯ ಬಾಳು ಯಶಸ್ವಿಯಾಗುವುದರಲ್ಲಿ ಯಾವುದೇ
ಅನುಮಾನವಿಲ್ಲ.ನಿತ್ಯ ಬದುಕಿಗೆ ಗೀತೆ ಹೇಗೆ ಅವಶ್ಯಕ..?ಒಂದು ಉದಾಹರಣೆಯನ್ನು ನೋಡೋಣ..

ಆಹಾರದಿಂದಲೇ ನಮ್ಮ ದೇಹಕ್ಕೆ ಶಕ್ತಿ ಸಿಗುತ್ತದೆ.ಶರೀರದ ಆರೋಗ್ಯ ಚೆನ್ನಾಗಿರಬೇಕೆಂದರೆ
ಸೇವಿಸುವ ಆಹಾರವೂ ಚೆನ್ನಾಗಿರಬೇಕು.ಆಹಾರವನ್ನು ಜಾಸ್ತಿ ಅಥವಾ ಕಡಿಮೆ
ಸೇವಿಸಬಾರದು.ಜಾಸ್ತಿ ಆಹಾರ ಅಥವಾ ಕಡಿಮೆ ಆಹಾರವನ್ನು ಸೇವಿಸುವುದರಿಂದ ಶರೀರದಲ್ಲಿ
ಅನಾರೋಗ್ಯವುಂಟಾಗುತ್ತದೆ.ಇದನ್ನೇ ಭಗವದ್ಗೀತೆಯ ಆರನೇ ಅಧ್ಯಾಯದ ೧೬ ನೇ ಶ್ಲೋಕದಲ್ಲಿ
ಶ್ರೀಕೃಷ್ಣ ಅರ್ಜುನನಿಗೆ ಹೇಳುತ್ತಾನೆ..

"ನಾತ್ಯಶ್ನತಸ್ತು ಯೋಗೋಸ್ತಿ ನ ಚೈಕಾಂತಮನಶ್ನತಃ |
ನ ಚಾತಿಸ್ವಪ್ನಶೀಲಸ್ಯ ಜಾಗ್ರತೋ ನೈವ ಚಾರ್ಜುನ ||"

ಅಂದರೆ,ಯಾರು ಜಾಸ್ತಿ ಆಹಾರವನ್ನು ಸೇವಿಸುತ್ತಾರೋ ಅವರು ತಮ್ಮ ಲಕ್ಷ್ಯದತ್ತ
ಸಾಗಲಾರರು.ಯಾರು ಕಡಿಮೆ ಆಹಾರವನ್ನು ಸೇವಿಸುತ್ತಾರೋ ಅವರೂ ಸಹ ತಮ್ಮ ಲಕ್ಷ್ಯದತ್ತ
ಸಾಗಲಾರರು.ಹಾಗಾಗಿ ಆಹಾರವನ್ನು ಸಮಪ್ರಮಾಣದಲ್ಲಿ ಸೇವಿಸಬೇಕು.ನಮ್ಮ ವೈದ್ಯಕೀಯ
ವಿಜ್ಞಾನ ತಿಳಿಸುವುದು ಇದನ್ನೇ ತಾನೇ..?ಅಪರಿಮಿತ ಆಹಾರವನ್ನು ಸೇವಿಸುವುದರಿಂದ
ಅಜೀರ್ಣ,ಆಸಿಡಿಟಿ,ಬೊಜ್ಜು,ಕೊಬ್ಬು ಮುಂತಾದ ಸಮಸ್ಯೆಗಳು ಬರುತ್ತವೆ.ಅತಿ ಕಡಿಮೆ
ಆಹಾರವನ್ನು ಸೇವಿಸುವುದರಿಂದ ಅಶಕ್ತತೆ,ಉದರಸಂಬಂಧಿ ರೋಗಗಳು,ರಕ್ತಹೀನತೆ ಮುಂತಾದ
ಖಾಯಿಲೆಗಳು ಬರುತ್ತವೆ.ಹಾಗಾಗಿ ಆಹಾರವನ್ನು ಅತಿಯಾಗಿ ಸೇವಿಸಬಾರದು,ಕಡಿಮೆಯೂ
ಆಗಬಾರದು.ಸಮಪ್ರಮಾಣದಲ್ಲಿ ಸೇವಿಸಿದಾಗಷ್ಟೇ ವ್ಯಕ್ತಿ
ಆರೋಗ್ಯವಂತನಾಗಿರುತ್ತಾನೆಂಬುದನ್ನು ಭಗವಂತ ಅದೆಷ್ಟೋ ಸಾವಿರ ವರ್ಷಗಳ ಹಿಂದೆಯೇ
ತಿಳಿಸಿದ್ದಾನೆ.

ಹಾಗೇ ಅವಶ್ಯಕತೆಯಿದ್ದಷ್ಟೇ ನಿದ್ರೆ ಮಾಡಬೇಕೆಂದು ಶ್ರೀಕೃಷ್ಣ ತಿಳಿಸುತ್ತಾನೆ.ಜಾಸ್ತಿ
ನಿದ್ರೆಯಿಂದ ಶರೀರ ಆಲಸ್ಯವನ್ನು ಹೊಂದುತ್ತದೆ.ಕಡಿಮೆ ನಿದ್ರೆಯಿಂದ ದೇಹ
ಬಲಹೀನತೆಯನ್ನು ಹೊಂದುತ್ತದೆಂದು ತಿಳಿಸಿದ್ದಾನೆ.ಆದ್ದರಿಂದ ನಿದ್ರೆಯೆಷ್ಟು
ಅವಶ್ಯಕತೆಯಿದೆಯೋ ಅಷ್ಟು ಸಮಯ ಮಲಗಬೇಕು.ಆರೋಗ್ಯವಂತ ವ್ಯಕ್ತಿಗೆ ಆರರಿಂದ ಎಂಟು
ಘಂಟೆಯಷ್ಟು ನಿದ್ರೆ ಸಾಕು.ಅದಕ್ಕಿಂತ ಜಾಸ್ತಿ ಮಲಗಿದರೆ ಹಲವು ವಿಧದ ರೋಗಗಳು
ಕಾಡಬಹುದು.

ಅದನ್ನೇ ಭಗವಂತ ತಿಳಿಸುತ್ತಾನೆ..

"ಯುಕ್ತಾಹಾರವಿಹಾರಸ್ಯ ಯುಕ್ತಚೇಷ್ಟಸ್ಯ ಕರ್ಮಸು |
ಯುಕ್ತಸ್ವಪ್ನಾವಬೋಧಸ್ಯ ಯೋಗೋ ಭವತಿ ದುಃಖಹಾ ||(ಭಗವದ್ಗೀತೆ ೬-೧೭)

ಅಂದರೆ ನಾವು ಯಾವುದನ್ನು ತಿನ್ನುತ್ತೇವೋ ಅದು ಆಹಾರ.ಆಹಾರ ಸೇವನೆಯ ನಂತರ ನಡೆಯುವುದು
ವಿಹಾರ.ಯಾವ ವ್ಯಕ್ತಿಯ ಆಹಾರ ಹಾಗೂ ವಿಹಾರ ಸಮರ್ಪಕವಾಗಿರುತ್ತದೆಯೋ ಅಂತಹ ವ್ಯಕ್ತಿ
ಸದಾ ಆರೋಗ್ಯವಂತನಾಗಿರುತ್ತಾನೆ.ಆತ ಜೀವನದಲ್ಲಿ ಸಫಲತೆಯನ್ನು
ಪಡೆಯುತ್ತಾನೆ.ಆಹಾರ,ವಿಹಾರಗಳಲ್ಲಿ ಅಸಮತೋಲನವುಂಟಾದರೆ ವ್ಯಕ್ತಿ ಅನಾರೋಗ್ಯದ ಕೂಪಕ್ಕೆ
ಬೀಳುತ್ತಾನೆ.ಅಸ್ವಸ್ಥ ವ್ಯಕ್ತಿ ಎಂದಿಗೂ ಸುಖವನ್ನು ಪಡೆಯಲಾರ ಎಂಬುದು ಭಗವಂತನ
ಅಭಿಪ್ರಾಯವಾಗಿದೆ.

"ಉಂಡು ನೂರಡಿ ತಿರುಗು" ಎಂಬ ಗಾದೆ ಮಾತಿದೆ ತಾನೇ..?ಊಟವಾದ ತಕ್ಷಣ ಮಲಗುವುದು
ಸರಿಯಲ್ಲವೆಂದು ಆಧುನಿಕ ವಿಜ್ಞಾನವೂ ಪ್ರತಿಪಾದಿಸುತ್ತದೆ.ಆದರೆ ಗೀತೆಯಲ್ಲಿ
ಆಹಾರ-ವಿಹಾರಗಳ ಕಲ್ಪನೆ ಸಾವಿರಾರು ವರ್ಷಗಳ ಹಿಂದೆಯೇ ಭಗವಂತನಿಂದ
ಹೇಳಲ್ಪಟ್ಟಿತ್ತು...!!

"ಯದಾ ವಿನಿಯತಂ ಚಿತ್ತಂ ಆತ್ಮನ್ಯೇವಾವತಿಷ್ಠತೇ |
ನಿಃಸ್ಪ್ರೃಹಃ ಸರ್ವಕಾಮೇಭ್ಯೋ ಯುಕ್ತ ಇತ್ಯುಚ್ಯತೇ ತದಾ ||"

ಈ ಶ್ಲೋಕದ ಅನುಸಾರ,ಯಾವ ವ್ಯಕ್ತಿಯ ಮನಸ್ಸು ನಿಯಂತ್ರಣದಲ್ಲಿರುತ್ತದೆಯೋ ಹಾಗೂ
ಭಗವಂತನನ್ನೇ ಸ್ಮರಿಸುತ್ತಿರುತ್ತದೆಯೋ ಅಂತಹ ವ್ಯಕ್ತಿ ಭೋಗ-ಸುಖ-ದುಃಖಗಳಿಂದ
ವಿಮುಖನಾಗುತ್ತಾನೆ.ಇಂತಹ ವ್ಯಕ್ತಿಗಳು ಜೀವನದ ಪ್ರತಿಯೊಂದು ಕ್ಷಣದಲ್ಲೂ
ಸಮಚಿತ್ತದಿಂದಿರುತ್ತಾರೆ.ಸುಖೋಪಭೋಗಗಳ ವ್ಯಾಮೋಹ ದೂರವಾಗಿರುತ್ತದೆ.ಹಾಗಾಗಿ ನಾವೂ ಸಹ
ನಮ್ಮ ಮನಸ್ಸನ್ನು ನಿಯಂತ್ರಣದಲ್ಲಿಡಲು ಯತ್ನಿಸಬೇಕು.ಧ್ಯಾನ ಹಾಗೂ ಯೋಗಗಳಿಂದ ಮನಸ್ಸಿನ
ನಿಯಂತ್ರಣವನ್ನು ಸಾಧಿಸಬಹುದು.ಆದ್ದರಿಂದ ಪ್ರತಿದಿನ ಮುಂಜಾನೆ ಅಥವಾ ಸಾಯಂಕಾಲ
ಧ್ಯಾನವನ್ನು ಮಾಡಬೇಕು.ಇದರಿಂದ ಮನಶ್ಶಾಂತಿ ಸಿಗುತ್ತದೆ.

ಹೀಗೆ ಭಗವದ್ಗೀತೆ ಕೇವಲ ಆಧ್ಯಾತ್ಮಕ್ಕಷ್ಟೇ ಸೀಮಿತವಲ್ಲ.ಮನುಷ್ಯನ ಶಾರೀರಿಕ ಹಾಗೂ
ಮಾನಸಿಕ ಆರೋಗ್ಯಕ್ಕೂ ಸಹಕಾರಿ.ಭಗವದ್ಗೀತೆಯ ತತ್ವಗಳನ್ನು ಓದಿ ಅರ್ಥಮಾಡಿಕೊಂಡು
ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ್ದು ಸನಾತನ ಧರ್ಮೀಯರಾದ ನಮ್ಮ ಆದ್ಯ ಕರ್ತವ್ಯ.

Comments

Popular posts from this blog

“ಸರ್ವೇ ಜನಾಃ ಸುಖಿನೋ ಭವಂತು”

“ಸರ್ವೇ ಜನಾಃ ಸುಖಿನೋ ಭವಂತು” ಜಗತ್ತಿನಲ್ಲಿ ಎಲ್ಲರೂ ಸುಖವಾಗಿರಲಿ. ”ಲೋಕಾಃ ಸಮಸ್ತಾಃ ಸುಖಿನೋ ಭವಂತು”ಎಲ್ಲ ಲೋಕಗಳೂ ಸುಖವಾಗಿರಲಿ”ಎಂದು ಬಯಸುವ ಭವ್ಯ ಸಂಸ್ಕೃತಿ ನಮ್ಮದು. ಜಗತ್ತಿನಲ್ಲಿ ಸದಾ ಶಾಂತಿಯನ್ನು ಬಯಸಿದವರು ನಾವು.ತೀರ ಅನಿವಾರ್ಯವಾದಾಗ ಶಸ್ತ್ರವನ್ನು ಹಿಡಿದಿದ್ದೇವೆ.”ದಂಡಂ ದಶಗುಣಂ” ಎಂದು ವೈರಿಗಳ ಅಟ್ಟಹಾಸವನ್ನು ನಿಯಂತ್ರಿಸಿದ್ದೇವೆ. ಶಾಂತಿ ಹಾಗೂ ಅಹಿಂಸೆ ನಮ್ಮ ಪರಮಧರ್ಮ.”ಅಹಿಂಸಾ ಪರಮೋ ಧರ್ಮಃ” ಎಂದು ಸಾರಿದವರು ನಾವು.ಇದಕ್ಕೆ ಮೂಲಪ್ರೇರಣೆ ನಮ್ಮ ವೇದ-ಶಾಸ್ತ್ರ-ಪುರಾಣ ಮುಂತಾದ ಧರ್ಮಗ್ರಂಥಗಳಲ್ಲಿರುವ ಶಾಂತಿ ಹಾಗೂ ಅಹಿಂಸಾ ತತ್ವಗಳು.ಶಾಂತಿಮಂತ್ರಗಳು ಕೇವಲ ನಮಗಷ್ಟೇ ಅಲ್ಲ,ಇಡೀ ಪ್ರಪಂಚ ಶಾಂತವಾಗಿರಲೆಂದು ಆಶಿಸುತ್ತವೆ. ಕೇವಲ ಮನುಷ್ಯನಷ್ಟೇ ಶಾಂತವಾಗಿದ್ದರೆ ಸಾಲದು.ಪರಮಾತ್ಮ,ಪ್ರಕೃತಿ,ವನೌಷಧಿ ಹೀಗೆ ಎಲ್ಲವೂ ಸದಾ ಶಾಂತವಾಗಿರಲೆಂದು ಶಾಂತಿಮಂತ್ರಗಳು ಬಯಸುತ್ತವೆ. ಅಂತಹ ಶಾಂತಿಮಂತ್ರಗಳ ಕಿರು ಪರಿಚಯವನ್ನು ಮಾಡಿಕೊಳ್ಳೋಣ.. ಓಂ ನಮೋ ಬ್ರಹ್ಮಣೇ ನಮೋ ಅಸ್ತ್ವಗ್ನಯೇ ನಮಃ ಪೃಥಿವ್ಯೈ ನಮ ಓಷಧೀಭ್ಯಃ | ನಮೋ ವಾಚೇ ನಮೋ ವಾಚಸ್ಪತಯೇ ನಮೋ ವಿಷ್ಣವೇ ಬೃಹತೇ ಕರೋಮಿ || ಓಂ ಶಾಂತಿಃ ಶಾಂತಿಃ ಶಾಂತಿಃ ಬ್ರಹ್ಮನಿಗೆ ನಮಸ್ಕಾರ,ಅಗ್ನಿಗೆ ನಮಸ್ಕಾರ,ಸಸ್ಯಗಳಿಗೆ ನಮಸ್ಕಾರ,ಮಾತಿಗೆ ನಮಸ್ಕಾರ,ಮಾತಿನ ಒಡೆಯನಿಗೆ ನಮಸ್ಕಾರ,ಸರ್ವಾಂತರ್ಯಾಮಿ ಹಾಗೂ ಸಮರ್ಥನಾದ ವಿಷ್ಣುವಿಗೆ ನಮಸ್ಕಾರ. ಓಂ ಶಾಂತಿಃ ಶಾಂತಿಃ ಶಾಂತಿಃ ಓಂ ಸಹನಾವವತ...

ದಶರಥ

ಇಕ್ಷ್ವಾಕುವಂಶದ ಪ್ರಸಿದ್ಧ ರಾಜ ದಶರಥ.ವಾಲ್ಮೀಕಿರಾಮಾಯಣದ ನಾಯಕ,ಮರ್ಯಾದಾಪುರುಷೋತ್ತಮ,ಪ್ರಾತಃಸ್ಮರಣೀಯ ಶ್ರೀರಾಮಚಂದ್ರನ ತಂದೆ.ದಶರಥನ ಹೆಸರಿನಿಂದಲೇ ರಾಮ "ದಾಶರಥಿರಾಮ" ಎಂದು ವಿಖ್ಯಾತನಾದ.ಅಜಮಹಾರಾಜನ ಪುತ್ರ ದಶರಥ,ಆತನ ತಾಯಿಯ ಹೆಸರು ಇಂದುಮತಿ. ಧೀರತೆಗೆ,ಧರ್ಮನಿಷ್ಟೆಗೆ ಹೆಸರಾಗಿದ್ದ ಅಯೋಧ್ಯೆಯ ರಾಜ ದಶರಥ.ಆದರೆ ಅತಿಯಾದ ವಿಷಯಾಸಕ್ತಿಗಳಿಂದ ಬದುಕನ್ನೇ ಅನರ್ಥ ಮಾಡಿಕೊಂಡ.ಭಾರ್ಗವರಿಂದ ಕಾಡಿ-ಬೇಡಿ ಕಲಿತಿದ್ದ ಶಬ್ದವೇಧಿ ವಿದ್ಯೆಯನ್ನು ಪರೀಕ್ಷಿಸಲು ಹೋಗಿ,ಅನ್ಯಾಯವಾಗಿ ಶ್ರವಣಕುಮಾರನನ್ನು ಕೊಂದು ಆತನ ಪಾಲಕರಿಂದ ಶಾಪಗ್ರಸ್ತನಾಗಿ ಪುತ್ರಶೋಕದಿಂದ ಪರಿತಪಿಸುತ್ತಾ ಇಹಲೋಕ ತ್ಯಜಿಸಿದ.ಲೋಕದ ಒಡೆಯನ ತಂದೆಯಾದರೂ ದುಃಖ ತಪ್ಪಲಿಲ್ಲ,ಮನೋನಿಗ್ರಹಿಯಾದರೂ  ಕಾಮನೆಗಳನ್ನು ಬಿಡಲಿಲ್ಲ.ರಾಮಾಯಣದ ದುರಂತನಾಯಕ ದಶರಥನೆಂದರೆ ಅತಿಶಯೋಕ್ತಿಯಾಗಲಾರದು. ಕೌಸಲ್ಯೆ,ಸುಮಿತ್ರೆ,ಕೈಕೇಯಿ ದಶರಥನ ಪ್ರಸಿದ್ಧ ಪತ್ನಿಯರು.ಆದರೆ ವಾಸ್ತವದಲ್ಲಿ ದಶರಥನಿಗೆ ಹಲವು ಪತ್ನಿಯರಿದ್ದರೆಂದು ಮೂಲರಾಮಾಯಣದ ಸಂಭಾಷಣೆಗಳಿಂದ ತಿಳಿಯಬಹುದು."ರಾಜಾನೋ ಬಹುವಲ್ಲಭಾಃ" ಎಂಬುದು ಸರಿ,ಆದರೆ ಅನೇಕ ಪತ್ನಿಯರಿದ್ದರೆ ರಾಜನ ಪರಿಸ್ಥಿತಿ ಎಷ್ಟು ದಯನೀಯವಾಗಿರಬಹುದೆಂಬುದಕ್ಕೆ ದಶರಥ ಮಹಾರಾಜ ಸ್ಪಷ್ಟ ಉದಾಹರಣೆ. ವಾಲ್ಮೀಕಿರಾಮಾಯಣದ ಒಂದು ಪ್ರಸಂಗ.ಅನುಸೂಯೆಯೊಂದಿಗೆ ಮಾತಾಡುತ್ತ ಸೀತೆ,"ರಾಮ ತನ್ನ ಮಾತೆ ಕೌಸಲ್ಯೆಗೆ ಎಷ್ಟು ಗೌರವವನ್ನು ನೀಡ...

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ

ದಟ್ಟವಾದ ಕಾಡಿನಲ್ಲಿ, ಒಂದು ಗರ್ಭವತಿ ಜಿಂಕೆಯು ತನ್ನ ಮಗುವಿಗೆ ಜನ್ಮ ಕೊಡುವುದಕ್ಕೆ ನದಿಯ ತೀರದಲ್ಲಿ ಹುಲ್ಲಿರುವ ಸಮತಟ್ಟಾದ, ಸುರಕ್ಷಿತವಾದ (!) ಸ್ಥಳವನ್ನು ಹುಡುಕಿ ಕೊಂಡಿತ್ತು. ಪ್ರಸವ ವೇದನೆ ಶುರುವ...