ಇಕ್ಷ್ವಾಕುವಂಶದ ಪ್ರಸಿದ್ಧ ರಾಜ ದಶರಥ.ವಾಲ್ಮೀಕಿರಾಮಾಯಣದ
ನಾಯಕ,ಮರ್ಯಾದಾಪುರುಷೋತ್ತಮ,ಪ್ರಾತಃಸ್ಮರಣೀಯ ಶ್ರೀರಾಮಚಂದ್ರನ ತಂದೆ.ದಶರಥನ
ಹೆಸರಿನಿಂದಲೇ ರಾಮ "ದಾಶರಥಿರಾಮ" ಎಂದು ವಿಖ್ಯಾತನಾದ.ಅಜಮಹಾರಾಜನ ಪುತ್ರ ದಶರಥ,ಆತನ
ತಾಯಿಯ ಹೆಸರು ಇಂದುಮತಿ. ಧೀರತೆಗೆ,ಧರ್ಮನಿಷ್ಟೆಗೆ ಹೆಸರಾಗಿದ್ದ ಅಯೋಧ್ಯೆಯ ರಾಜ
ದಶರಥ.ಆದರೆ ಅತಿಯಾದ ವಿಷಯಾಸಕ್ತಿಗಳಿಂದ ಬದುಕನ್ನೇ ಅನರ್ಥ ಮಾಡಿಕೊಂಡ.ಭಾರ್ಗವರಿಂದ
ಕಾಡಿ-ಬೇಡಿ ಕಲಿತಿದ್ದ ಶಬ್ದವೇಧಿ ವಿದ್ಯೆಯನ್ನು ಪರೀಕ್ಷಿಸಲು ಹೋಗಿ,ಅನ್ಯಾಯವಾಗಿ
ಶ್ರವಣಕುಮಾರನನ್ನು ಕೊಂದು ಆತನ ಪಾಲಕರಿಂದ ಶಾಪಗ್ರಸ್ತನಾಗಿ ಪುತ್ರಶೋಕದಿಂದ
ಪರಿತಪಿಸುತ್ತಾ ಇಹಲೋಕ ತ್ಯಜಿಸಿದ.ಲೋಕದ ಒಡೆಯನ ತಂದೆಯಾದರೂ ದುಃಖ
ತಪ್ಪಲಿಲ್ಲ,ಮನೋನಿಗ್ರಹಿಯಾದರೂ ಕಾಮನೆಗಳನ್ನು ಬಿಡಲಿಲ್ಲ.ರಾಮಾಯಣದ ದುರಂತನಾಯಕ
ದಶರಥನೆಂದರೆ ಅತಿಶಯೋಕ್ತಿಯಾಗಲಾರದು.
ಕೌಸಲ್ಯೆ,ಸುಮಿತ್ರೆ,ಕೈಕೇಯಿ ದಶರಥನ ಪ್ರಸಿದ್ಧ ಪತ್ನಿಯರು.ಆದರೆ ವಾಸ್ತವದಲ್ಲಿ
ದಶರಥನಿಗೆ ಹಲವು ಪತ್ನಿಯರಿದ್ದರೆಂದು ಮೂಲರಾಮಾಯಣದ ಸಂಭಾಷಣೆಗಳಿಂದ
ತಿಳಿಯಬಹುದು."ರಾಜಾನೋ ಬಹುವಲ್ಲಭಾಃ" ಎಂಬುದು ಸರಿ,ಆದರೆ ಅನೇಕ ಪತ್ನಿಯರಿದ್ದರೆ ರಾಜನ
ಪರಿಸ್ಥಿತಿ ಎಷ್ಟು ದಯನೀಯವಾಗಿರಬಹುದೆಂಬುದಕ್ಕೆ ದಶರಥ ಮಹಾರಾಜ ಸ್ಪಷ್ಟ ಉದಾಹರಣೆ.
ವಾಲ್ಮೀಕಿರಾಮಾಯಣದ ಒಂದು ಪ್ರಸಂಗ.ಅನುಸೂಯೆಯೊಂದಿಗೆ ಮಾತಾಡುತ್ತ ಸೀತೆ,"ರಾಮ ತನ್ನ
ಮಾತೆ ಕೌಸಲ್ಯೆಗೆ ಎಷ್ಟು ಗೌರವವನ್ನು ನೀಡುತ್ತಾನೋ ಅದೇ ಗೌರವವನ್ನು ಉಳಿದೆಲ್ಲಾ
ಮಾತೆಯರಿಗೆ ನೀಡುತ್ತಾನೆ.ಎಲ್ಲರೂ ತನ್ನ ಮಾತೆಯರೆಂದುಕೊಂಡು ವ್ಯವಹರಿಸುತ್ತಾನೆ.ಆದರೆ
ದಶರಥ ಒಬ್ಬೊಬ್ಬ ರಾಣಿಯರನ್ನು ಪ್ರತ್ಯೇಕಭಾವದಿಂದ ನೋಡುತ್ತಾನೆ" ಎಂದು ದಶರಥನ
ಗುಣವನ್ನು ವರ್ಣಿಸುತ್ತಾಳೆ.ರಾಮ ವನವಾಸಕ್ಕೆ ಹೋಗುವುದು ನಿಶ್ಚಯವಾಗುತ್ತದೆ.ಆಗ ನೊಂದ
ಲಕ್ಷ್ಮಣ ಕೌಸಲ್ಯೆಗೆ "ಇನ್ನೂ ವಿಷಯಭೋಗಗಳಲ್ಲೇ ನಿರತವಾಗಿರುವ,ಬುದ್ಧಿಯ ವಿಪರ್ಯಾಸ
ಹೊಂದಿರುವ,ವೃದ್ಧರಾಜ (ಅಂದರೆ ದಶರಥ) ಕೈಕೇಯಿಯ ಮಾತನ್ನು ಹೇಗೆ ತಿರಸ್ಕರಿಸಿಯಾನು..?"
ಎಂದು ಕೇಳುತ್ತಾನೆ.
ಇದೆಲ್ಲಾ ಅನರ್ಥಗಳಿಗೆ ಕಾರಣ ಯಾರು..?ಸಾಕ್ಷಾತ್
ದಶರಥನೇ..?ಕೈಕೇಯಿಯೇ..?ಮಂಥರೆಯೇ..?ಕೈಕೇಯಿ ದಶರಥನ ವಯಸ್ಸಿಗಿಂತ ತುಂಬಾ
ಚಿಕ್ಕವಳು.ಮನೆಹಾಳು ಮಂಥರೆಯ ಮಾತನ್ನು ಕೇಳದಿರೆಂದು ದಶರಥ ಬುದ್ಧಿ
ಹೇಳಬಹುದಿತ್ತಲ್ಲ..?ಕೈಕೇಯಿ ಒಪ್ಪಿಕೊಂಡರೆ ಯೋಗನಿಷ್ಟರಾದ ಶ್ರವಣಕುಮಾರನ ಪಾಲಕರ ಶಾಪದ
ಗತಿ..?ಒಂದಕ್ಕೊಂದು ಕಾರಣ.ದಶರಥನಿಗೆಲ್ಲವೂ ತಿಳಿದಿತ್ತೇನೋ..?ಅನರ್ಥಗಳ ಸರಪಳಿಯೇ
ಸೃಷ್ಟಿಯಾಗಿವೆ,ಒಂದಕ್ಕೊಂದು ಕೊಂಡಿಗಳಿವೆಯೆಂಬುದು..!!ಹಾಗಾಗಿ ಪುತ್ರಶೋಕವನ್ನು
ಅನುಭವಿಸುವ ದುರಂತ ಬಂದೊದಗಿತು.
ಕೈಕೇಯಿಯ ಜೊತೆ ವಿವಾಹ ನಡೆದದ್ದೂ ದಶರಥನ ವಿಷಯಲಂಪಟತೆಯಿಂದ..!!ಕೈಕೇಯಿ ಇನ್ನೂ
ಚಿಕ್ಕವಳು,ದಶರಥನಿಗೆ ಆಗಲೇ ವೃದ್ಧಾಪ್ಯ ಸಮೀಪಿಸಿದೆ."ಕೈಕೇಯಿಗೆ ಹುಟ್ಟುವ ಮಗುವೇ
ಮುಂದಿನ ಅಯೋಧ್ಯೆಯ ಚಕ್ರವರ್ತಿ" ಎಂಬ ಕರಾರಿಗೆ,ಕನ್ಯಾಶುಲ್ಕಕ್ಕೊಪ್ಪಿ
ಮದುವೆಯಾಗೇಬಿಟ್ಟ.ವಾನಪ್ರಸ್ಥಾಶ್ರಮದ ಅಂಚಿನಲ್ಲಿದ್ದ ದಶರಥನಿಗೆ ಇದೆಲ್ಲಾ
ಬೇಕಿತ್ತೇ..??
ದಶರಥನಿಗೊಬ್ಬಳು ಮಗಳಿದ್ದಳು ಆಕೆಯ ಹೆಸರು ಶಾಂತಾ.ಅವಳನ್ನು ಅಂಗದೇಶದ ರಾಜ,ತನ್ನ
ಪರಮಮಿತ್ರ ರೋಮಪಾದನಿಗೆ ದತ್ತು ನೀಡಿದ್ದ.ಮುಂದೆ ಶಾಂತಾ ಋಷ್ಯಶೃಂಗ ಮಹರ್ಷಿಯನ್ನು
ಮದುವೆಯಾಗುತ್ತಾಳೆ.ಅದೇ ಋಷ್ಯಶೃಂಗ ಮಹರ್ಷಿಯ ಸಹಾಯದೊಂದಿಗೆ ದಶರಥ "ಪುತ್ರಕಾಮೇಷ್ಟಿ"
ಯಜ್ಞವನ್ನು ಮಾಡುತ್ತಾನೆ.
ದಶರಥನಿಗೆ "ಪುತ್ರಕಾಮೇಷ್ಟಿ" ಯಾಗವನ್ನು ತಾನೂ ಮಾಡಬೇಕೆಂದನಿಸಿದ್ದೇಕೆ..?ಅದಕ್ಕೂ
ಒಂದು ಕಾರಣವಿದೆ.ಒಮ್ಮೆ ತನ್ನ ನೂರು ಅಕ್ಷೌಹಿಣಿ ಸೈನ್ಯದೊಂದಿಗೆ ದಶರಥ "ಸುಮಾನಸನಗರೀ"
ಎಂಬ ರಾಜ್ಯದ ಮೇಲೆ ಆಕ್ರಮಣ ಮಾಡುತ್ತಾನೆ.ಅಲ್ಲಿಯ ರಾಜ ಸಾಧ್ಯ.ಸಾಧ್ಯ ಹಾಗೂ ದಶರಥನ
ಮಧ್ಯೆ ಭೀಕರಯುದ್ಧ ನಡೆಯುತ್ತದೆ,ಅದೂ ಒಂದು ಮಾಸದಪರ್ಯಂತ.ಕೊನೆಗೆ ದಶರಥನಿಗೇ
ವಿಜಯಲಕ್ಷ್ಮಿ ಒಲಿಯುತ್ತಾಳೆ.ಸಾಧ್ಯನನ್ನು ಬಂಧಿಸುತ್ತಾನೆ.ಅಪ್ಪನನ್ನು ಬಂಧಿಸಿದ
ವಿಷಯವನ್ನು ಅರಿತ ಚಿಕ್ಕಬಾಲಕ ಭೂಷಣ ರಣಾಂಗಣಕ್ಕೆ ಬಂದು ದಶರಥನ ವಿರುದ್ಧ ಯುದ್ಧ
ಸಾರುತ್ತಾನೆ.ದಶರಥ ಭೂಷಣನನ್ನೂ ಸೋಲಿಸಿ ಆತನನ್ನು ಬಂಧಿಸಿ ಸಾಧ್ಯ ಹಾಗೂ ಭೂಷಣರನ್ನು
ಕಾರಾಗೃಹದಲ್ಲಿರಿಸುತ್ತಾನೆ.ಅಪ್ಪ ಹಾಗೂ ಮಗನ ಆತ್ಮೀಯತೆ,ಪ್ರೀತಿಯನ್ನು ಕಂಡ ದಶರಥನಿಗೆ
ತನಗೂ ಪುತ್ರರು ಬೇಕೆಂಬ ಬಯಕೆಯುಂಟಾಗುತ್ತದೆ.ಭೂಷಣನಂತಹ ಗುಣವಂತ ಪುತ್ರರೇ ಬೇಕೆಂದು
ಇಚ್ಛಿಸುತ್ತಾನೆ.ಸಾಧ್ಯನಲ್ಲಿ ಪುತ್ರಪ್ರಾಪ್ತಿಗಾಗಿ ಏನು ಮಾಡಬೇಕೆಂದು
ಕೇಳುತ್ತಾನೆ.ಆಗ ಸಾಧ್ಯ "ಮಹಾವಿಷ್ಣುವನ್ನು ಸಂತೃಪ್ತಿಗೊಳಿಸು,ಪುತ್ರಭಾಗ್ಯ
ಲಭಿಸುತ್ತದೆ" ಎನ್ನುತ್ತಾನೆ.ಇದರಿಂದ ಸಂತುಷ್ಟನಾದ ದಶರಥ ಸುಮಾನಸನಗರಿಯನ್ನು
ಸಾಧ್ಯನಿಗೇ ನೀಡಿ ಅಯೋಧ್ಯೆಗೆ ಹಿಂದಿರುಗುತ್ತಾನೆ.
ಅನೇಕ ವ್ರತಗಳನ್ನು ಆಚರಿಸಿ ಕೊನೆಗೆ ದಶರಥ ಪುತ್ರಕಾಮೇಷ್ಟಿ ಯಜ್ಞವನ್ನು
ನೆರವೇರಿಸುತ್ತಾನೆ.ಮಾಹಾವಿಷ್ಣು ಯಜ್ಞದಲ್ಲಿ ಆವರ್ಭವಿಸುತ್ತಾನೆ.ಆಗ ದಶರಥ
ಧಾರ್ಮಿಕಪ್ರವೃತ್ತಿಯುಳ್ಳ,ದೀರ್ಘಾಯುಷಿಗಳಾದ ಪುತ್ರರತ್ನರನ್ನು ನೀಡೆಂದು
ಬೇಡಿಕೊಳ್ಳುತ್ತಾನೆ."ತಥಾಸ್ತು" ಎಂದ ಮಹಾವಿಷ್ಣು ಯಜ್ಞಕ್ಕಾಗಿ ಬಳಸುವ
ಚರು(ಅನ್ನ)ವಿನಲ್ಲಿ ಪ್ರವೇಶಿಸುತ್ತಾನೆ.ದಶರಥ ಅದನ್ನು ಸಮಪಾಲು ಮಾಡಿ ತನ್ನ
ರಾಣಿಯರಿಗೆ ಹಂಚುತ್ತಾನೆ.ರಾಮ,ಲಕ್ಷ್ಮಣ,ಭರತ,ಶತ್ರುಘ್ನರೆಂಬ ನಾಲ್ಕು
ಪುತ್ರರತ್ನರನ್ನು ಪಡೆಯುತ್ತಾನೆ.
ಒಮ್ಮೆ,ಶನಿಗ್ರಹ ರೋಹಿಣೀಶಕಟವೆಂಬ ನಕ್ಷತ್ರಮಂಡಲವನ್ನು ಛೇದಿಸುತ್ತದೆಯೆಂಬ ವಿಷಯ
ದಶರಥನಿಗೆ ತಿಳಿಯಿತು.ಶನಿಗ್ರಹ ರೋಹಿಣೀಶಕಟವನ್ನು ಛೇದಿಸಿದರೆ ಇಡೀ ವಿಶ್ವಕ್ಕೇ
ಆಪತ್ತು ಬಂದೊದಗುತ್ತಿತ್ತು.ಹನ್ನೆರಡು ವರ್ಷಗಳ ಕಾಲ ಭೀಕರಕ್ಷಾಮ
ತಲೆದೂರುತ್ತಿತ್ತು.ಇದನ್ನರಿತ ದಶರಥ ನೇರವಾಗಿ ನಭೋಮಂಡಲವನ್ನೇ
ಪ್ರವೇಶಿಸುತ್ತಾನೆ.ಧನುಸ್ಸನ್ನು ಹಿಡಿದು ಭಯಂಕರ ಸಂಹಾರಾಸ್ತ್ರವನ್ನು ಬಿಡಲು
ಸನ್ನದ್ಧನಾಗುತ್ತಾನೆ.ಇವನ ಪ್ರತಾಪವನ್ನು ಕಂಡ ಶನಿಮಹಾತ್ಮ ಪ್ರಸನ್ನನಾಗಿ ವರವನ್ನು
ನೀಡಲು ಮುಂದಾಗುತ್ತಾನೆ."ಎಲ್ಲಿಯವರೆಗೆ ಭೂಮಿ ಇರುತ್ತದೆಯೋ,ಆಕಾಶದಲ್ಲಿ
ಸೂರ್ಯ-ಚಂದ್ರರಿರುತ್ತಾರೋ ಅಲ್ಲಿಯವರೆಗೆ ನೀನು ರೋಹಿಣೀಶಕಟವನ್ನು ಬೇಧಿಸಬಾರದು" ಎಂಬ
ವರವನ್ನು ಕೇಳುತ್ತಾನೆ.ಶನಿಮಹಾತ್ಮ ಅನುಗ್ರಹಿಸುತ್ತಾನೆ.ಸಂತುಷ್ಟನಾದ ದಶರಥ ತನ್ನ
ರಾಜ್ಯಕ್ಕೆ ಹಿಂದಿರುಗುತ್ತಾನೆ.
(ರೋಹಿಣೀಶಕಟ ಬೇಧವೆಂದರೆ ಏನೆಂದು ತಿಳಿದುಕೊಳ್ಳಲು ಈ ಲಿಂಕನ್ನು ನೋಡಿ..
ರಾಮಾಯಣದಲ್ಲಿ ದಶರಥನ ಪಾತ್ರ ವಿಶಿಷ್ಟವಾದದ್ದು.ದಶರಥ ಶೂರನೇ..?ದಶರಥ
ಭಾವುಕನೇ..?ದಶರಥ ವಿಷಯಾಸಕ್ತನೇ..?ದಶರಥ ಧಾರ್ಮಿಕನೇ..?ದಶರಥ ವ್ಯಾಮೋಹಿಯೇ..?ದಶರಥ
ಶಾಪಗ್ರಸ್ತನೇ..?ಇದಕ್ಕೆಲ್ಲವೂ ಒಂದೇ ಉತ್ತರ ಹೌದು...!!
ಲೋಕಾಃ ಸಮಸ್ತಾಃ ಸುಖಿನೋ ಭವಂತು
Comments
Post a Comment