Skip to main content

ಈಗಿನ ಉದ್ಯಮಿಗಳಿಗೆ ವ್ಯಾಪಾರದೊಂದಿಗೂ ದ್ರೋಹ ಚಿಂತನೆ , ಅವರಿಗೆ ವ್ಯಾಪಾರವೆಂದರೆ ದೇಶ ಚಿಂತನೆ ! ✍ಪ್ರತಾಪ ಸಿಂಹ

ಕಬ್ಬಿಣ ಹಾಗೂ ಉಕ್ಕು ಕಂಪನಿ ಸ್ಥಾಪನೆ
ಜಲವಿದ್ಯುತ್
ವಿಶ್ವದರ್ಜೆಯ ಶೈಕ್ಷಣಿಕ ಸಂಸ್ಥೆಗಳ ನಿರ್ಮಾಣ
ಈ ಮೂರೂ ಕನಸುಗಳು ಅವರ ಜೀವಿತಾವಧಿಯಲ್ಲಿ ಸಾಕಾರಗೊಳ್ಳಲಿಲ್ಲ. ಆದರೆ ಅವರ ಉತ್ತರಾಧಿಕಾರಿಗಳಿಗೆ ದಿಕ್ಸೂಚಿಯಾದವು, ದೃಷ್ಟಿಕೋನ ಕೊಟ್ಟವು, ದಾರಿ ದೀಪವಾದವು, ಭಾರತ ನಿರ್ಮಾಣದಲ್ಲಿ ಬಹುಮುಖ್ಯ ಪಾತ್ರ ವಹಿಸಿದವು. ಇಂತಹ ಕನಸುಗಳನ್ನು ಕಂಡಾತ ಈ ದೇಶ ಕಂಡ ಯಾವ ನಾಯಕನೂ ಅಲ್ಲ, ಪ್ರಧಾನಿ, ಮುಖ್ಯಮಂತ್ರಿಗಳೂ ಅಲ್ಲ. ಪಾರ್ಸಿ ಸಮುದಾಯದ ಅರ್ಚಕ ಅಥವಾ ಪೂಜಾರಿಯೊಬ್ಬರ ಮಗ.
ಅವರೇ ಜೆ.ಎನ್. ಟಾಟಾ ಅಥವಾ ಜೆಮ್‌ಸೆಟ್‌ಜಿ ನಸರ್‌ವಾನ್‌ಜಿ ಟಾಟಾ ಅವರ ಕನಸ್ಸಿನ ಹಿಂದೆಯೂ ಒಂದೊಂದು ಘಟನೆಗಳಿವೆ. ಒಮ್ಮೆ ಅವರು ಬ್ರಿಟನ್‌ನ ಮ್ಯಾಂಚೆಸ್ಟರ್‌ಗೆ ಹೋಗಿದ್ದರು, ಜವಳಿ ತಯಾರಿಸುವ ಯಂತ್ರದ ಖರೀದಿಗಾಗಿ. ಅದೇ ಮ್ಯಾಂಚೆಸ್ಟರ್‌ನಲ್ಲಿ ಥಾಮಸ್ ಕಾರ್ಲೈಲ್‌ನ ಭಾಷಣವಿತ್ತು. ಅದನ್ನು ಆಲಿಸಲು ಜೆ.ಎನ್. ಟಾಟಾ ಕೂಡ ಹೋಗಿದ್ದರು. ಭಾಷಣವೇನೋ ಮುಗಿಯಿತು, ಆದರೆ ಹೊರಬರುವಷ್ಟರಲ್ಲಿ ಟಾಟಾ ಕಂಗಳಲ್ಲಿ ಭಾರತದ ಕೈಗಾರಿಕಾ ಕ್ಷೇತ್ರಕ್ಕೇ ಒಂದು ಮಹತ್ತರ ತಿರುವು ನೀಡುವಂಥ ಕನಸೊಂದು ಮೂಡಿತ್ತು. ಕಬ್ಬಿಣ ಹಾಗೂ ಉಕ್ಕಿನ ಕಾರ್ಖಾನೆಯನ್ನು ಭಾರತದಲ್ಲಿ ಸ್ಥಾಪನೆ ಮಾಡಬೇಕೆಂಬ ನಿರ್ಧಾರಕ್ಕೆ ಬಂದುಬಿಟ್ಟಿದ್ದರು. ಇವತ್ತು ವೆಲ್ಡಿಂಗ್ ಅಂಗಡಿ ಆರಂಭಿಸುವುದಕ್ಕೇ ಹಿಂದೂ ಮುಂದೂ ಯೋಚನೆ ಮಾಡಬೇಕು. ಅಂಥದ್ದರಲ್ಲಿ 1880ರಲ್ಲೇ ಭಾರೀ ಬಂಡವಾಳ ಹೂಡಿಕೆ ಬೇಕಾದ ಕಬ್ಬಿಣ ಹಾಗೂ ಉಕ್ಕಿನ ಕಾರ್ಖಾನೆಯನ್ನು ಸ್ಥಾಪಿಸಲು ಟಾಟಾ ಯೋಚಿಸಿದರು.
ಒಬ್ಬನೇ ಮಗನಾದ ಜೆ.ಎನ್. ಟಾಟಾಗೆ ತಂದೆಯಂತೆ ಅರ್ಚಕನಾಗಬಹುದಿತ್ತು. ಆದರೆ ಅವರು ವ್ಯಾಪಾರೋದ್ಯಮದತ್ತ ಆಕರ್ಷಿತರಾದರು. 1868ರಲ್ಲಿ ಖಾಸಗಿ ವ್ಯಾಪಾರ ಸಂಸ್ಥೆಯೊಂದನ್ನು ಪ್ರಾರಂಭಿಸಿದಾಗ ಜೆ.ಎನ್. ಟಾಟಾಗೆ 29 ವರ್ಷ. ಕೈಯಲ್ಲಿದ್ದುದು 21 ಸಾವಿರ ರೂ. ಆದರೆ ಪರಿಶ್ರಮಕ್ಕೆ, ದೂರದೃಷ್ಟಿಗೆ, ಹಂಬಲಕ್ಕೆ, ಸಾಧಿಸುವ ಛಲಕ್ಕೆ ಕೊರತೆಯಿರಲಿಲ್ಲ. ಇತ್ತ ಬ್ರಿಟಿಷರು ನಮ್ಮ ಗುಡಿಕೈಗಾರಿಕೆಗಳನ್ನು ವ್ಯವಸ್ಥಿತವಾಗಿ ಹೊಸಕಿ ಹಾಕುತ್ತಿದ್ದರು. ಏಕೆಂದರೆ ಬ್ರಿಟನ್ನಿನಲ್ಲಿ ತಯಾರಾದ ಹತ್ತಿ ಬಟ್ಟೆಗಳಿಗೆ ಭಾರತದಲ್ಲಿ ಮಾರುಕಟ್ಟೆ ಬೇಕಿತ್ತು. ಇಂತಹ ಘೋರ ಅನ್ಯಾಯದ ಬಗ್ಗೆ ಜೆ.ಎನ್. ಟಾಟಾ ಹೋರಾಟಕ್ಕಿಳಿಯಲಿಲ್ಲ. ಆದರೆ ಯೂರೋಪ್ ಪ್ರವಾಸ ಕೈಗೊಂಡರು. ಜವಳಿ ಉದ್ಯಮಕ್ಕೆ ಹೆಸರಾಗಿದ್ದ ಬ್ರಿಟನ್‌ನ ಮ್ಯಾಂಚೆಸ್ಟರ್‌ಗೆ ಭೇಟಿ ನೀಡಿದರು. ಕಾರ್ಖಾನೆಗಳನ್ನು ಜಾಲಾಡಿದರು. ಸ್ವದೇಶಕ್ಕೆ ಮರಳಿದ್ದೇ ತಡ, 1877ರಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿ ‘ಎಂಪ್ರೆಸ್ ಮಿಲ್ಸ್’ ಕಾರ್ಖಾನೆ ಪ್ರಾರಂಭ ಮಾಡಿದರು. ಹೀಗೆ ಆಧುನಿಕ ಭಾರತಕ್ಕೆ ಬಂತು. ಅದು ‘ಸ್ವದೇಶಿ ಮಿಲ್’ಗಳೆಂದೇ ಖ್ಯಾತಿ ಪಡೆಯಿತು. ದೇಶದಲ್ಲೇ ಹತ್ತಿ ಬಟ್ಟೆಗಳು ಸಿದ್ಧಗೊಳ್ಳತೊಡಗಿದವು. ವಿದೇಶಿ ಸರಕುಗಳನ್ನು ತಿರಸ್ಕರಿಸಿ ಎಂಬ ಕರೆಯನ್ನು ಟಾಟಾ ನೀಡಿದ ವಿಧಾನ ಅದು. ಸ್ವದೇಶಿ ಚಳವಳಿಯನ್ನು ಕೃತಿಯಲ್ಲಿ ತೋರಿದ ಕೀರ್ತಿ ಜೆ.ಎನ್. ಟಾಟಾಗೆ ಸಲ್ಲಬೇಕು.
ಇನ್ನೊಂದು ಘಟನೆ ಕೇಳಿ, ಒಮ್ಮೆ ತಮ್ಮ ಇಬ್ಬರು ಬ್ರಿಟಿಷ್ ಸ್ನೇಹಿತರ ಜತೆ ಜೆ.ಎನ್. ಟಾಟಾ ಪ್ರತಿಷ್ಠಿತ ಹೋಟೆಲ್ಲೊಂದಕ್ಕೆ ಹೊರಟಿದ್ದರು. ಶ್ವೇತವರ್ಣೀಯರಾದ ಬ್ರಿಟಿಷರಿಗೇನೋ ನಗುಮುಖದ ಸ್ವಾಗತ ದೊರೆಯಿತು. ಆದರೆ ಭಾರತೀಯನೆಂಬ ಕಾರಣಕ್ಕೆ ಟಾಟಾ ಅವರನ್ನು ಹೊರದಬ್ಬಲಾಯಿತು. ಅದರ ಮೆಟ್ಟಿಲಿನಿಂದ ಕೆಳಗಿಳಿಯುವಾಗಲೇ ವಿಶ್ವದರ್ಜೆಯ ಹೋಟೆಲ್‌ಗಳನ್ನು ನಿರ್ಮಿಸುವ, ನಡೆಸುವ ತಾಕತ್ತು ಭಾರತೀಯರಿಗೂ ಇದೆ ಎಂಬುದನ್ನು ಸಾಬೀತುಪಡಿಸುವ ಸಂಕಲ್ಪ ಮಾಡಿದರು. 1902ರಲ್ಲಿ ‘ತಾಜ್ ಗ್ರೂಪ್ ಆಫ್ ಹೋಟೆಲ್‌ಸ್’ ಪ್ರಾರಂಭವಾಯಿತು. 1903ರಲ್ಲಿ ‘ಹೋಟೆಲ್ ತಾಜ್‌ಮಹಲ್’ ಸಿದ್ಧಗೊಂಡಾಗ ಟಾಟಾ ಬರೀ ಆಡುವವರಲ್ಲ, ಮಾಡಿಯೂ ತೋರುವವರು ಎಂಬುದು ಮತ್ತೊಮ್ಮೆ ಸಾಬೀತಾಯಿತು.
ಹಾಗಂತ ಟಾಟಾ ಕೇವಲ ಒಬ್ಬ ಶುದ್ಧ ಉದ್ಯಮಿಯಾಗಿರಲಿಲ್ಲ. ಆಳುವ ಸರ್ಕಾರಕ್ಕೇ ಇರದಿದ್ದ ಸಾಮಾಜಿಕ ಕಾಳಜಿ ಅವರಲ್ಲಿತ್ತು. ಆದ್ದರಿಂದಲೇ ಹಿಂದೆಯೇ ‘ನಿವೃತ್ತಿ ವೇತನ ನಿಧಿ’ಯನ್ನು ಆರಂಭಿಸಿದರು. 1895ರಲ್ಲಿ ಅಪಘಾತ ಪರಿಹಾರ ಯೋಜನೆ ಆರಂಭವಾಯಿತು. ಇಂತಹ ಪ್ರಯತ್ನ ಭಾರತದಲ್ಲೇ ಮೊದಲನೆಯದಾಗಿತ್ತು. 1892ರಲ್ಲೇ ಟಾಟಾ ದಾನ ದತ್ತಿ ಸಂಸ್ಥೆ ಸ್ಥಾಪನೆ ಮಾಡಿ, ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳುವವರಿಗೆ ಸ್ಕಾಲರ್‌ಷಿಪ್ ಆರಂಭಿಸಿದರು. ಒಂದು ಕಾಲಕ್ಕೆ ಎಂತಹ ಪರಿಸ್ಥಿತಿ ಸೃಷ್ಟಿಯಾಯಿತೆಂದರೆ ಪ್ರತಿಷ್ಠಿತ ಭಾರತೀಯ ನಾಗರೀಕ ಸೇವೆ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಹೊರಬರುತ್ತಿದ್ದ ಐವರಲ್ಲಿ ಇಬ್ಬರು ಟಾಟಾ ವಿದ್ಯಾರ್ಥಿವೇತನ ಪಡೆದವರಾಗಿರುತ್ತಿದ್ದರು!
ಈ ನಡುವೆ 1893ರಲ್ಲಿ ‘ಎಂಪ್ರೆಸ್ ಆಫ್ ಹಡಗು ಜಪಾನ್‌ನಿಂದ ಅಮೆರಿಕದತ್ತ ಪಯಣ ಆರಂಭಿಸಿತ್ತು. ಕಬ್ಬಿಣ ಹಾಗೂ ಉಕ್ಕು ಕಾರ್ಖಾನೆ ಸ್ಥಾಪಿಸುವ ಆಸೆಯಿಂದ ತಾಂತ್ರಿಕ ಸಹಕಾರ ಯಾಚಿಸುವ ಸಲುವಾಗಿ ಟಾಟಾ ಅಮೆರಿಕಕ್ಕೆ ಹೊರಟು ನಿಂತಿದ್ದರು. ಇತ್ತ ವಿಶ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಸಲುವಾಗಿ ಸ್ವಾಮಿ ವಿವೇಕಾನಂದರೂ ಅದೇ ಹಡಗೇರಿದ್ದರು! ಅಲ್ಲಿ ಇಬ್ಬರೂ ಪರಸ್ಪರ ಭೇಟಿಯಾದರು. ಅಮೆರಿಕವನ್ನು ಸೇರುವ ವೇಳೆಗೆ ಜೆ.ಎನ್. ಟಾಟಾ ವಿವೇಕಾನಂದರ ಸ್ವಾವಲಂಬನೆ ತತ್ವಕ್ಕೆ ಮಾರು ಹೋಗಿದ್ದರು. ಅದು ಹೊಸ ಶಕೆಯ ಆರಂಭಕ್ಕೆ ನಾಂದಿಯಾಯಿತು. ವಿವೇಕಾನಂದರ ಆಶಯದಂತೆ ವಿಧದ ವೈಜ್ಞಾನಿಕ ಸಂಶೋಧನೆಗೆ ಅವಕಾಶ ಕಲ್ಪಿಸುವ ಸಂಶೋಧನಾ ಕೇಂದ್ರವನ್ನು ಸ್ಥಾಪಿಸುವ ನಿರ್ಧಾರ ಕೈಗೊಂಡರು.
ಭಾರತಕ್ಕೆ ವಾಪಸ್ಸಾದ ಟಾಟಾ, 1898 ಡಿಸೆಂಬರ್ 31ರಂದು ಲಾರ್ಡ್ ಕರ್ಝನ್ ಮುಂದೆ ರೂಪುರೇಷೆಯನ್ನಿಟ್ಟರು. ಆದರೆ ಆತ ಅಡ್ಡಗಾಲು ಹಾಕಿದ. ಆದರೂ ಛಲ ಬಿಡದ ಟಾಟಾ ಬ್ರಿಟನ್‌ನ ರಾಯಲ್ ಸೊಸೈಟಿ ಮುಂದೆ ಪ್ರಸ್ತಾವವನ್ನಿಟ್ಟರು. ಮನವಿಯ ಮೇರೆಗೆ ಕೂಡಲೇ ಭಾರತ ಪ್ರವಾಸ ಕೈಗೊಂಡ ನೊಬೆಲ್ ಪ್ರಶಸ್ತಿ ವಿಜೇತ ವಿಲಿಯಂ ರಾಂಸೆ ಬೆಂಗಳೂರಿನ ಮಲ್ಲೇಶ್ವರ ಬಳಿ ಭಾರತೀಯ ವಿಜ್ಞಾನ (ಐಐಎಸ್‌ಸಿ) ವನ್ನು ನಿರ್ಮಿಸಲು ಸಮ್ಮತಿ ಸೂಚಿಸಿದ.
ದುರದೃಷ್ಟವಶಾತ್ ಆಸೆ ಕೈಗೂಡುವ ಮೊದಲೇ 1904, ಮೇ 19ರಂದು ಜೆ.ಎನ್. ಟಾಟಾ ನಮ್ಮನ್ನಗಲಿದರು. ಆದರೇನಂತೆ ಅವರ ಉತ್ತರಾಧಿಕಾರಿಗಳಾಗಿ ಬಂದ ಸರ್ ದೊರಾಬ್ಜಿ ಟಾಟಾ, ಜೆ.ಆರ್.ಡಿ. (ಜಹಾಂಗೀರ್ ರತನ್‌ಜಿ ದಾದಾ ಭಾಯಿ ಟಾಟಾ) ಟಾಟಾ, ಜೆ.ಎನ್. ಟಾಟಾರ ಪರಂಪರೆಯನ್ನು ಮುಂದುವರಿಸಿದರು. 1907ರಲ್ಲಿ ಬಿಹಾರದ ಜೆಮ್‌ಷೆಡ್‌ಪುರದಲ್ಲಿ ಟಾಟಾ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ (ಟೆಸ್ಕೋ) ಸ್ಥಾಪನೆ ಮಾಡುವುದರೊಂದಿಗೆ ಜೆ.ಎನ್. ಟಾಟಾ ಅವರ ಕನಸುಗಳಲ್ಲೊಂದನ್ನು ಸಾಕಾರಗೊಳಿಸಿದರು.
ಟಾಟಾ ಜಲವಿದ್ಯುತ್ ಪೂರೈಕೆ ಕಂಪನಿ ಜನ್ಮ ತಳೆಯುವುದರೊಂದಿಗೆ ಬಾಂಬೆಗೆ ಕೈಗೆಟುಕುವ ಬೆಲೆಯಲ್ಲಿ ವಿದ್ಯುತ್ ಪೂರೈಕೆ ಮಾಡಬೇಕೆಂಬ ಕನಸೂ ಈಡೇರಿತು. ಅಷ್ಟೇ ಅಲ್ಲ, 1911ರಲ್ಲಿ ಬೆಂಗಳೂರಿನ ಮಲ್ಲೇಶ್ವರ ಬಳಿ 372 ಎಕರೆ ವಿಸ್ತಾರದಲ್ಲಿ ಭವ್ಯ ಭಾರತೀಯ ವಿಜ್ಞಾನ ಮಂದಿರ ಹೊರಹೊಮ್ಮಿತು. ಅದು ಈ ದೇಶದ ವೈಜ್ಞಾನಿಕ ಶಕೆಯನ್ನೇ ಆರಂಭಿಸಿತು. ಈ ದೇಶ ಕಂಡ ಮಹಾನ್ ವಿಜ್ಞಾನಿಗಳಾದ ಸಿ.ವಿ. ರಾಮನ್, ಹೋಮಿ ಜೆ. ಭಾಭಾ, ವಿಕ್ರಂ ಸಾರಾಭಾಯ್, ಜೆ.ಸಿ. ಘೋಷ್, ಎಂ.ಎಸ್ ಎಸ್. ಭಗವಂತಮ್, ಸತೀಶ್ ಧವನ್, ಸಿ.ಎನ್.ಆರ್. ರಾವ್ ಮತ್ತು ನಮ್ಮ ರಾಜಾರಾಮಣ್ಣ ಇವರೆಲ್ಲರೂ ಟಾಟಾ ಕೂಸಾದ ಐಐಎಸ್‌ಸಿನ ಜತೆ ಗುರುತಿಸಿಕೊಂಡವರೇ ಆಗಿದ್ದಾರೆ.
ಇತ್ತ 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂತು. ನೆಹರು ಪ್ರಧಾನಿ ಗದ್ದುಗೆಯ ಕನಸು ಕಾಣುತ್ತಿದ್ದರು. ‘ರಾಷ್ಟ್ರಪಿತ’ ಗಾಂಧೀಜಿ ಕೋಮು ಸೌಹಾರ್ದತೆಯ ಮಂತ್ರ ಪಠಿಸುತ್ತಿದ್ದರು. ಆದರೆ ಜೆ.ಆರ್.ಡಿ. ಮತ್ತು ಅವರ ಪ್ರಾಣ ಸ್ನೇಹಿತ ಹೋಮಿ ಜೆ. ಭಾಭಾ ‘ಅಣು ತಂತ್ರಜ್ಞಾನ’ ರೂಪಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದರು. ಲಂಡನ್‌ನ ಕಿಂಗ್ ಭೌತಶಾಸ್ತ್ರ ಅಧ್ಯಯನ ಮಾಡುತ್ತಿದ್ದ ರಾಜಾರಾಮಣ್ಣನವರನ್ನು ಭೇಟಿ ಮಾಡಿದ ಹೋಮಿ ಭಾಭಾ, ನ್ಯೂಕ್ಲಿಯರ್ ಸೈನ್‌ಸ್ ಓದುವಂತೆ ಪ್ರೇರೇಪಣೆ ನೀಡಿದರು. ಅಷ್ಟೇ ಅಲ್ಲ, ಜೆ.ಎನ್. ಟಾಟಾ ಸ್ಕಾಲರ್‌ಷಿಪ್ ಕೊಡಿಸಿ ರಾಜಾರಾಮಣ್ಣನವರನ್ನು ಅಣುವಿಜ್ಞಾನಿಯಾಗಿಸಿ ಸ್ವದೇಶಕ್ಕೆ ಕರೆತಂದರು. ಅದೇ ರಾಮಣ್ಣ ಈ ದೇಶದ ನಿಜವಾದ ಅಣುಜನಕರಾದರು!
ಕೇವಲ ಅಮೆರಿಕ, ರಷ್ಯಾಗಳಿಗೆ ಸಾಧ್ಯವಿದ್ದ ‘ನ್ಯೂಕ್ಲಿಯರ್ ರಿಯಾಕ್ಟರ್’ ಅನ್ನು ನಾವೇ ರೂಪಿಸುತ್ತೇವೆ ಎಂದು ಹೋಮಿ ಭಾಭಾ ಮುಂದಾದಾಗ ಸಕಲ ಪ್ರೋತ್ಸಾಹ ನೀಡುವುದನ್ನು ಬಿಟ್ಟು ಪ್ರಧಾನಿ ನೆಹರು ವಿರೋಧ ಆದರೂ ಜೆ.ಆರ್.ಡಿ. ಟಾಟಾ ಧೃತಿಗೆಡಲಿಲ್ಲ. ಅಂತಹ ತಂತ್ರಜ್ಞಾನ ರೂಪಿಸಲು ಬೇಕಾಗಿದ್ದ ಸಕಲ ಸವಲತ್ತುಗಳನ್ನು, ಹಣಕಾಸು ಸೌಲಭ್ಯವನ್ನು ಸ್ವತಃ ಪೂರೈಸಿದರು. ಆ ಪ್ರಯತ್ನದ ಫಲವಾಗಿ ಮೊದಲ ಅಣು ರಿಯಾಕ್ಟರ್ ರೂಪುಗೊಂಡಿತು. ಅದು ದೇಶದ ಅಣ್ವಸ್ತ್ರ ತಯಾರಿಕೆಗೆ ಭಾಷ್ಯ ಬರೆಯಿತು. ಇಂದು ಭಾರತ ಒಂದು ಅಣ್ವಸ್ತ್ರ ರಾಷ್ಟ್ರವಾಗಿ ಹೊರಹೊಮ್ಮಿದ್ದರೆ, ನಮ್ಮ ದೇಶದ ವಿರುದ್ಧ ದಾಳಿ ಮಾಡಲು ಶತ್ರುಗಳು ಹಿಂದೇಟು ಹಾಕುತ್ತಿದ್ದರೆ ಅದಕ್ಕೆ ಟಾಟಾ ಕಂಪನಿ ಕೂಡ ಕಾರಣ. ಅದು ದೇಶ ಕಟ್ಟುವ ಕೈಜೋಡಿಸಿದ ಕಂಪನಿ.
ಒಂದಾನೊಂದು ಕಾಲದಲ್ಲಿ ಅಮೆರಿಕದಲ್ಲೊಂದು ಮಾತಿತ್ತು- What is good for General Motors is good for America ಆದರೆ ನಮ್ಮ ಟಾಟಾ ಮಾತ್ರ What is good for India is good for TATA ಎಂದು ಭಾವಿಸಿರುವ ಕಂಪನಿ. ಅಂಥ ಕಂಪನಿಯನ್ನು ಹುಟ್ಟುಹಾಕಿದ, ‘ವ್ಯಾಪಾರಂ ದ್ರೋಹ ಚಿಂತನಂ’ ಎನ್ನುವವರ ಮಧ್ಯೆ ‘ವ್ಯಾಪಾರಂ ದೇಶ ಚಿಂತನಂ’ ಎಂಬ ಧ್ಯೇಯವನ್ನಿಟ್ಟುಕೊಂಡು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಭಾಗಿಯಾದ ಜೆ.ಎನ್. ಟಾಟಾ 1839, ಮಾರ್ಚ್ 3ರಂದು ಕಳೆದವಾರಕ್ಕೆ 180 ವರ್ಷಗಳಾದವು.
ರಾಷ್ಟ್ರೀಕೃತ ಬ್ಯಾಂಕ್ ಗಳ ಲೂಟಿ ಹೊಡೆದು ದೇಶದಿಂದಲೇ ಪಲಾಯನ ಮಾಡಿರುವ ಮಲ್ಯ, ನೀರವ್ , ಚೌಕ್ಸಿ ಮತ್ತು ಅವರಿಗೆ ಕೊಳ್ಳೆ ಹೊಡೆಯಲು ಅವಕಾಶ ಕೊಟ್ಟ ಚಿದಂಬರಂ, ರಾಹುಲ್ ಸೋನಿಯಾ ಗಾಂಧಿಯವರಂತಹ ರಾಜಕಾರಣಿಗಳ ವರ್ತನೆಯಿಂದ ಹತಾಶೆಯ ಮಡುವಿಗೆ ಬಿದ್ದಾಗಲು ದೇಶ ಕಟ್ಟಿದ ಟಾಟಾ ಮತ್ತೆ ನಮಗೆ ಪ್ರೇರಣೆ ನೀಡಬಲ್ಲರು. ಹಾಗಾಗಿ ನೆನಪಿಸಿಕೊಂಡೆ.

Comments

Popular posts from this blog

“ಸರ್ವೇ ಜನಾಃ ಸುಖಿನೋ ಭವಂತು”

“ಸರ್ವೇ ಜನಾಃ ಸುಖಿನೋ ಭವಂತು” ಜಗತ್ತಿನಲ್ಲಿ ಎಲ್ಲರೂ ಸುಖವಾಗಿರಲಿ. ”ಲೋಕಾಃ ಸಮಸ್ತಾಃ ಸುಖಿನೋ ಭವಂತು”ಎಲ್ಲ ಲೋಕಗಳೂ ಸುಖವಾಗಿರಲಿ”ಎಂದು ಬಯಸುವ ಭವ್ಯ ಸಂಸ್ಕೃತಿ ನಮ್ಮದು. ಜಗತ್ತಿನಲ್ಲಿ ಸದಾ ಶಾಂತಿಯನ್ನು ಬಯಸಿದವರು ನಾವು.ತೀರ ಅನಿವಾರ್ಯವಾದಾಗ ಶಸ್ತ್ರವನ್ನು ಹಿಡಿದಿದ್ದೇವೆ.”ದಂಡಂ ದಶಗುಣಂ” ಎಂದು ವೈರಿಗಳ ಅಟ್ಟಹಾಸವನ್ನು ನಿಯಂತ್ರಿಸಿದ್ದೇವೆ. ಶಾಂತಿ ಹಾಗೂ ಅಹಿಂಸೆ ನಮ್ಮ ಪರಮಧರ್ಮ.”ಅಹಿಂಸಾ ಪರಮೋ ಧರ್ಮಃ” ಎಂದು ಸಾರಿದವರು ನಾವು.ಇದಕ್ಕೆ ಮೂಲಪ್ರೇರಣೆ ನಮ್ಮ ವೇದ-ಶಾಸ್ತ್ರ-ಪುರಾಣ ಮುಂತಾದ ಧರ್ಮಗ್ರಂಥಗಳಲ್ಲಿರುವ ಶಾಂತಿ ಹಾಗೂ ಅಹಿಂಸಾ ತತ್ವಗಳು.ಶಾಂತಿಮಂತ್ರಗಳು ಕೇವಲ ನಮಗಷ್ಟೇ ಅಲ್ಲ,ಇಡೀ ಪ್ರಪಂಚ ಶಾಂತವಾಗಿರಲೆಂದು ಆಶಿಸುತ್ತವೆ. ಕೇವಲ ಮನುಷ್ಯನಷ್ಟೇ ಶಾಂತವಾಗಿದ್ದರೆ ಸಾಲದು.ಪರಮಾತ್ಮ,ಪ್ರಕೃತಿ,ವನೌಷಧಿ ಹೀಗೆ ಎಲ್ಲವೂ ಸದಾ ಶಾಂತವಾಗಿರಲೆಂದು ಶಾಂತಿಮಂತ್ರಗಳು ಬಯಸುತ್ತವೆ. ಅಂತಹ ಶಾಂತಿಮಂತ್ರಗಳ ಕಿರು ಪರಿಚಯವನ್ನು ಮಾಡಿಕೊಳ್ಳೋಣ.. ಓಂ ನಮೋ ಬ್ರಹ್ಮಣೇ ನಮೋ ಅಸ್ತ್ವಗ್ನಯೇ ನಮಃ ಪೃಥಿವ್ಯೈ ನಮ ಓಷಧೀಭ್ಯಃ | ನಮೋ ವಾಚೇ ನಮೋ ವಾಚಸ್ಪತಯೇ ನಮೋ ವಿಷ್ಣವೇ ಬೃಹತೇ ಕರೋಮಿ || ಓಂ ಶಾಂತಿಃ ಶಾಂತಿಃ ಶಾಂತಿಃ ಬ್ರಹ್ಮನಿಗೆ ನಮಸ್ಕಾರ,ಅಗ್ನಿಗೆ ನಮಸ್ಕಾರ,ಸಸ್ಯಗಳಿಗೆ ನಮಸ್ಕಾರ,ಮಾತಿಗೆ ನಮಸ್ಕಾರ,ಮಾತಿನ ಒಡೆಯನಿಗೆ ನಮಸ್ಕಾರ,ಸರ್ವಾಂತರ್ಯಾಮಿ ಹಾಗೂ ಸಮರ್ಥನಾದ ವಿಷ್ಣುವಿಗೆ ನಮಸ್ಕಾರ. ಓಂ ಶಾಂತಿಃ ಶಾಂತಿಃ ಶಾಂತಿಃ ಓಂ ಸಹನಾವವತ...

ದಶರಥ

ಇಕ್ಷ್ವಾಕುವಂಶದ ಪ್ರಸಿದ್ಧ ರಾಜ ದಶರಥ.ವಾಲ್ಮೀಕಿರಾಮಾಯಣದ ನಾಯಕ,ಮರ್ಯಾದಾಪುರುಷೋತ್ತಮ,ಪ್ರಾತಃಸ್ಮರಣೀಯ ಶ್ರೀರಾಮಚಂದ್ರನ ತಂದೆ.ದಶರಥನ ಹೆಸರಿನಿಂದಲೇ ರಾಮ "ದಾಶರಥಿರಾಮ" ಎಂದು ವಿಖ್ಯಾತನಾದ.ಅಜಮಹಾರಾಜನ ಪುತ್ರ ದಶರಥ,ಆತನ ತಾಯಿಯ ಹೆಸರು ಇಂದುಮತಿ. ಧೀರತೆಗೆ,ಧರ್ಮನಿಷ್ಟೆಗೆ ಹೆಸರಾಗಿದ್ದ ಅಯೋಧ್ಯೆಯ ರಾಜ ದಶರಥ.ಆದರೆ ಅತಿಯಾದ ವಿಷಯಾಸಕ್ತಿಗಳಿಂದ ಬದುಕನ್ನೇ ಅನರ್ಥ ಮಾಡಿಕೊಂಡ.ಭಾರ್ಗವರಿಂದ ಕಾಡಿ-ಬೇಡಿ ಕಲಿತಿದ್ದ ಶಬ್ದವೇಧಿ ವಿದ್ಯೆಯನ್ನು ಪರೀಕ್ಷಿಸಲು ಹೋಗಿ,ಅನ್ಯಾಯವಾಗಿ ಶ್ರವಣಕುಮಾರನನ್ನು ಕೊಂದು ಆತನ ಪಾಲಕರಿಂದ ಶಾಪಗ್ರಸ್ತನಾಗಿ ಪುತ್ರಶೋಕದಿಂದ ಪರಿತಪಿಸುತ್ತಾ ಇಹಲೋಕ ತ್ಯಜಿಸಿದ.ಲೋಕದ ಒಡೆಯನ ತಂದೆಯಾದರೂ ದುಃಖ ತಪ್ಪಲಿಲ್ಲ,ಮನೋನಿಗ್ರಹಿಯಾದರೂ  ಕಾಮನೆಗಳನ್ನು ಬಿಡಲಿಲ್ಲ.ರಾಮಾಯಣದ ದುರಂತನಾಯಕ ದಶರಥನೆಂದರೆ ಅತಿಶಯೋಕ್ತಿಯಾಗಲಾರದು. ಕೌಸಲ್ಯೆ,ಸುಮಿತ್ರೆ,ಕೈಕೇಯಿ ದಶರಥನ ಪ್ರಸಿದ್ಧ ಪತ್ನಿಯರು.ಆದರೆ ವಾಸ್ತವದಲ್ಲಿ ದಶರಥನಿಗೆ ಹಲವು ಪತ್ನಿಯರಿದ್ದರೆಂದು ಮೂಲರಾಮಾಯಣದ ಸಂಭಾಷಣೆಗಳಿಂದ ತಿಳಿಯಬಹುದು."ರಾಜಾನೋ ಬಹುವಲ್ಲಭಾಃ" ಎಂಬುದು ಸರಿ,ಆದರೆ ಅನೇಕ ಪತ್ನಿಯರಿದ್ದರೆ ರಾಜನ ಪರಿಸ್ಥಿತಿ ಎಷ್ಟು ದಯನೀಯವಾಗಿರಬಹುದೆಂಬುದಕ್ಕೆ ದಶರಥ ಮಹಾರಾಜ ಸ್ಪಷ್ಟ ಉದಾಹರಣೆ. ವಾಲ್ಮೀಕಿರಾಮಾಯಣದ ಒಂದು ಪ್ರಸಂಗ.ಅನುಸೂಯೆಯೊಂದಿಗೆ ಮಾತಾಡುತ್ತ ಸೀತೆ,"ರಾಮ ತನ್ನ ಮಾತೆ ಕೌಸಲ್ಯೆಗೆ ಎಷ್ಟು ಗೌರವವನ್ನು ನೀಡ...

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ

ದಟ್ಟವಾದ ಕಾಡಿನಲ್ಲಿ, ಒಂದು ಗರ್ಭವತಿ ಜಿಂಕೆಯು ತನ್ನ ಮಗುವಿಗೆ ಜನ್ಮ ಕೊಡುವುದಕ್ಕೆ ನದಿಯ ತೀರದಲ್ಲಿ ಹುಲ್ಲಿರುವ ಸಮತಟ್ಟಾದ, ಸುರಕ್ಷಿತವಾದ (!) ಸ್ಥಳವನ್ನು ಹುಡುಕಿ ಕೊಂಡಿತ್ತು. ಪ್ರಸವ ವೇದನೆ ಶುರುವ...