Skip to main content

ಕಾಂಗ್ರೆಸಿಗರ ಸ್ವಾತಂತ್ರ್ಯ ಹೋರಾಟಕ್ಕೆ ಗದ್ದುಗೆ ಏರುವ ಗುರಿ ಇತ್ತು, ಆದರೆ ಸಾವರ್ಕರ್‌ಗೆ ... ? ✍ಪ್ರತಾಪ ಸಿಂಹ

ಆ ವೀರ ಕಲಿಯನ್ನು ನೆನಪಿಸಿಕೊಂಡಾಗಲೆಲ್ಲ ದಿವಂಗತ ವಿದ್ಯಾನಂದ ಶೆಣೈ ಕಣ್ಣಮುಂದೆ ಬರುತ್ತಾರೆ. ಆರು ವರ್ಷಗಳ ಹಿಂದೆ ಅವರು ಮಾಡಿದ್ದ ಭಾಷಣದ ಝೇಂಕಾರ ಕಿವಿಯಲ್ಲಿ ಇನ್ನೂ ಹಸಿಯಾಗಿಯೇ ಇದೆ.
“ಅವತ್ತು ಛಾಫೇಕರ್ ಸಹೋದರರು ಬ್ರಿಟಿಷ್ ಅಧಿಕಾರಿ ರಾಂಡ್ ನನ್ನು ಹತ್ಯೆ ಮಾಡಿದರು. ಅದು ಬ್ರಿಟಿಷರಿಗೆ ತಿಳಿದುಹೋಯಿತು. ಬಂಧಿಸಿ ವಿಚಾರಣೆಗೆ ಗುರಿಪಡಿಸಿದ ಬ್ರಿಟಿಷರು ಛಾಫೇಕರ್ ಸಹೋದರರ ಮೇಲೆ “ಕೊಲೆ’ ಆರೋಪ ಹೊರಿಸಿದರು. ಕೊನೆಗೆ ಗಲ್ಲಿಗೂ ಏರಿಸಿದರು. ಇದನ್ನೆಲ್ಲಾ ನೋಡಿದ 14 ವರ್ಷದ ಬಾಲಕ ವಿನಾಯಕ ದಾಮೋದರ ಸಾವರ್ಕರ್ ಮನಸ್ಸಿಗೆ ಬಹಳ ನೋವಾಗುತ್ತದೆ. ಮನೆಗೆ ಓಡೋಡಿ ಬಂದ ಆತ ದೇವರ ಕೋಣೆಯ ಬಾಗಿಲು ತೆರೆದು ದೇವಿಯ ಮುಂದೆ ಕುಳಿತು ಕೇಳುತ್ತಾನೆ. “ಅಮ್ಮಾ…. ಛಾಫೇಕರ್ ಸಹೋದರರು ಮಾಡಿದ್ದು “ಕೊಲೆ’ಯೋ, “ಸಂಹಾರ’ವೋ ನಾವು “ದುರುಳರ ಸಂಹಾರ’ ಎನ್ನುತ್ತೇವೆ. ಪುಣೆಗೆ ಪ್ಲೇಗ್ ಬಡಿದಾಗ ಉಸ್ತುವಾರಿ ವಹಿಸಿ ಬಂದ ರಾಂಡ್  ಮಾಡಿದ್ದೇನು? ಪ್ಲೇಗ್ ಪೀಡಿತರನ್ನು ಪತ್ತೆ ಹಚ್ಚುವ ಸಲುವಾಗಿ ಜನರನ್ನು ಬೀದಿಗೆಳೆದ. ಮಹಿಳೆಯರು ಮನೆ ಮುಂದೆ ಅರೆಬೆತ್ತಲಾಗಿ ನಿಲ್ಲುವಂತೆ ಮಾಡಿದ, ಕೆಲ ಮಹಿಳೆಯರ ಮೇಲೆ ಅತ್ಯಾಚಾರ ಕೂಡ ನಡೆಯಿತು. ಅಂತಹ ಪ್ರಜಾಪೀಡಕ ರಾಂಡ್ ನನ್ನು ಕೊಂದರೆ ಅದು ಹೇಗೆ ಕೊಲೆಯಾಗುತ್ತದೆ? ಅದು ದುಷ್ಟ ಸಂಹಾರವಲ್ಲವೆ ದೇವಿ?”
ಒಂದು ಕಡೆ ವಿದ್ಯಾನಂದ ಶೆಣೈ ಅವರ ಭಾಷಣ ನಮ್ಮನ್ನು ಮಂತ್ರಮುಗ್ಧಗೊಳಿಸುತ್ತಿದ್ದರೆ ಮತ್ತೊಂದೆಡೆ ಸಾವರ್ಕರರು ಮನವನ್ನೆಲ್ಲ ಆವರಿಸಿಬಿಡುತ್ತಾರೆ. ವಿನಾಯಕ ದಾಮೋದರ ಸಾವರ್ಕರ್ ಎಂಬ ವ್ಯಕ್ತಿತ್ವವೇ ಅಂಥದ್ದು. ಅವರ ಪ್ರಭಾವಕ್ಕೆ ಒಳಗಾಗದವರು ಯಾರಿದ್ದಾರೆ?
ಇಂಡಿಯಾ ಹೌಸ್.
ಆ ಕಾಲದಲ್ಲಿ ಉನ್ನತ ವ್ಯಾಸಂಗಕ್ಕೆಂದು ಬ್ರಿಟನ್ ಗೆ ತೆರಳಿದ ಭಾರತೀಯ ವಿದ್ಯಾರ್ಥಿಗಳೆಲ್ಲ ತಂಗುತ್ತಿದ್ದುದೇ ಅಲ್ಲ್ಲಿ. ಪುಣೆಯ ಫರ್ಗೂಸನ್ ಕಾಲೇಜಿನಲ್ಲಿ ಬಿಎ ಪದವಿ ಪೂರೈಸಿ ಲಾ ಓದಲು ಬ್ರಿಟನ್ನಿನ ಪ್ರತಿಷ್ಠಿತ Gray’s Inn  ಕಾಲೇಜಿಗೆ ಸೇರಿದಾಗ ಸಾವರ್ಕರ್ ಕೂಡ ಆಶ್ರಯ ಪಡೆದುಕೊಂಡಿದ್ದು ಅದೇ ಇಂಡಿಯಾ ಹೌಸ್ ನಲ್ಲಿ. ಅವರು ಕಾನೂನು ಪದವಿ ಕಲಿಯುವುದಕ್ಕೆಂದು ಬಂದಿದ್ದರೂ ಅದು ನೆಪಮಾತ್ರವಾಗಿತ್ತು. ಅಪ್ಪಟ ದೇಶಪ್ರೇಮಿಯಾದ ಅವರಿಗೆ ಬ್ರಿಟಿಷರಿಂದ ಪದವಿ ಪಡೆದುಕೊಳ್ಳುವುದಕ್ಕಿಂತ ಸ್ವಾತಂತ್ರ್ಯ ಗಳಿಸಿಕೊಳ್ಳುವುದು ಮುಖ್ಯವಾಗಿತ್ತು. ಇಂಡಿಯಾ ಹೌಸ್ ನಲ್ಲೇ ವಿದ್ಯಾರ್ಥಿಗಳನ್ನು ಕಲೆಹಾಕಿ ದಾಸ್ಯದಿಂದ ಬಳಲುತ್ತಿರುವ ದೇಶದ ಪರಿಸ್ಥಿತಿಯನ್ನು ವಿವರಿಸತೊಡಗಿದರು. ಅದು ನಿತ್ಯ ಕಾಯಕವಾಯಿತು. ಸಮ್ಮೋಹನಗೊಳಿಸುವಂಥ ಅವರ ಭಾಷಣವನ್ನು ಕೇಳಲು ಬರುವವರ ಸಂಖ್ಯೆಯೂ ಹೆಚ್ಚಾಗತೊಡಗಿತು. ಅದೊಂದು ದಿನ ಲಂಡನ್ನಿನಲ್ಲಿ ಅಲೆಯುತ್ತಿದ್ದ ಶೋಕಿಲಾಲನೊಬ್ಬ ತನ್ನ ಮಾರ್ಗ ಮಧ್ಯದಲ್ಲಿ ಕಂಡ ಇಂಡಿಯಾ ಹೌಸ್್ಗೆ ಆಗಮಿಸಿದ. ಅದೇ ವೇಳೆಗೆ ಸಾವರ್ಕರ್ ಭಾಷಣ ನಡೆಯುತಿತ್ತು. ಅವರು ತಾಯ್ನಾಡಿನ ಪರಿಸ್ಥಿತಿಯನ್ನು ವಿವರಿಸುತ್ತಿದ್ದರೆ ದೇಶಕ್ಕೆ ಎದುರಾಗಿರುವ ಹೀನಾತಿ ಹೀನ ಸ್ಥಿತಿಯನ್ನು ಕೇಳಿ ಆ ಶೋಕಿಲಾಲನ ರಕ್ತ ಕುದಿಯತೊಡಗಿತು. ಆ ದಿನದಿಂದ ಶೋಕಿಲಾಲ ಕೂಡ ಇಂಡಿಯಾ ಹೌಸ್್ಗೆ ಕಾಯಂ ಬರಲಾರಂಭಿಸಿದ. ವಿನಾಯಕ ದಾಮೋದರ ಸಾವರ್ಕರ್ ಅವನನ್ನು ಆವಾಹನೆ ಮಾಡಿಬಿಟ್ಟರು. ಆತ ಅವರ ಭಕ್ತನಾಗಿಬಿಟ್ಟ.
ಆ ಶೋಕಿಲಾಲ ಮತ್ತಾರೂ ಅಲ್ಲ, ಮದನ್ ಲಾಲ್ ಧೀಂಗ್ರಾ!
1908ರಲ್ಲಿ ಸಾವರ್ಕರ್ ಲಂಡನ್ ನಲ್ಲೊಂದು ಕಾರ್ಯಕ್ರಮವನ್ನು ಆಯೋಜಿಸಿದರು. ಅದು 1857ರಲ್ಲಿ ನಡೆದಿದ್ದ ಮೊದಲ ಭಾರತ ಸ್ವಾತಂತ್ರ ಸಂಗ್ರಾಮದ ವಾರ್ಷಿಕ ದಿನ ಸ್ಮರಣೆಯಾಗಿತ್ತು. ಬಹುತೇಕ ಭಾರತೀಯ ವಿದ್ಯಾರ್ಥಿಗಳು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸಾವರ್ಕರ್ ಭಾಷಣ ಅವರನ್ನು ಅದೆಷ್ಟು ಪ್ರಭಾವಿತಗೊಳಿಸಿತ್ತೆಂದರೆ ತಮ್ಮ ಕೋಟಿನ ಮೇಲೆ “1857ರ ಸ್ಮರಣೆ’ ಎಂದು ಬರೆದಿರುವ ಬ್ಯಾಡ್ಜ್ ಹಾಕಿಕೊಂಡು ತಮ್ಮ ತಮ್ಮ ತರಗತಿಗಳಿಗೆ ಹೋಗಿದ್ದರು. ಬ್ರಿಟಿಷ್ ಅಧಿಪತ್ಯದ ಬಗ್ಗೆ ಅತಿಯಾದ ಹೆಮ್ಮೆ ಇಟ್ಟುಕೊಂಡಿದ್ದ ಇಂಗ್ಲಿಷರಿಗೆ ಇದನ್ನು ಸಹಿಸಲಾಗಲಿಲ್ಲ. ಬ್ರಿಟನ್ನಿನಲ್ಲೇ ಬ್ರಿಟಿಷ್ ಚಕ್ರಾಧಿಪತ್ಯಕ್ಕೆ ಸಡ್ಡುಹೊಡೆಯುವುದೇನು ಸಾಮಾನ್ಯ ಮಾತೆ? ಇದು ಇಂಗ್ಲಿಷರನ್ನು ಕುಪಿತಗೊಳಿಸಿತು. ಬಹಳ ಚಂದವಾಗಿ ಧಿರಿಸು ಮಾಡಿಕೊಂಡು, ಅದರ ಮೇಲೆ ಬ್ಯಾಡ್ಜ್ ಅಂಟಿಸಿಕೊಂಡು ಹೋಗುತ್ತಿದ್ದ ಧೀಂಗ್ರಾನತ್ತ ಧಾವಿಸಿದ ಇಂಗ್ಲಿಷನೊಬ್ಬ ಬ್ಯಾಡ್ಜನ್ನು ಕಿತ್ತೊಗೆಯಲು ಕೈಚಾಚಿದ. ಅಷ್ಟರಲ್ಲಿ ಅವನ ಕೈ ತಡೆದು ಕಪಾಳಮೋಕ್ಷ ಮಾಡಿದ ಧೀಂಗ್ರಾ, ಆತನನ್ನು ನೆಲಕ್ಕುರುಳಿಸಿ ಎದೆ ಮೇಲೆ ಕುಳಿತು, “ನನ್ನ ದೇಶದ ಚಿಹ್ನೆ ಮೇಲೆ ಕೈಹಾಕಿದರೆ ಜೋಕೆ’ ಎಂದು ಧಮಕಿ ಹಾಕಿದ. ಭಾರತೀಯ ವಿದ್ಯಾರ್ಥಿಗಳಲ್ಲಿ ಅಂತಹ ತೀವ್ರ ದೇಶಪ್ರೇಮವನ್ನು ತುಂಬಿದ್ದರು ಸಾವರ್ಕರ್. ಮದನ್ ಲಾಲ್ ಧೀಂಗ್ರಾ 1909ರಲ್ಲಿ ಕರ್ಝನ್ ವೇಯ್ಲಿಯನ್ನು ಕೊಂದುಹಾಕಿದ್ದು ಸಾವರ್ಕರ್ ಆದೇಶದಂತೆಯೇ. ಆತ ವಿದೇಶದಲ್ಲಿ ನೇಣಿಗೇರಿದ ಮೊದಲ ಭಾರತೀಯ ಕ್ರಾಂತಿಕಾರಿ. ಸಾವರ್ಕರ್ ಅಂದರೆ ಒಂದು ಪ್ರೇರಕ ಶಕ್ತಿಯಾಗಿತ್ತು. ಗೆರಿಲ್ಲಾ ಯುದ್ಧದ ಮೂಲಕ ಬ್ರಿಟಿಷರನ್ನು ಹೊಡೆದೋಡಿಸಬೇಕು ಎನ್ನುತ್ತಿದ್ದರು. ಅಭಿನವ ಭಾರತ, ಫ್ರೀ ಇಂಡಿಯಾ ಸೊಸೈಟಿಗಳನ್ನು ಸ್ಥಾಪಿಸಿದ್ದ ಸಾವರ್ಕರ್ ಒಬ್ಬ ಮಹಾನ್ ಚಿಂತಕ ಕೂಡ ಹೌದು. 1857ರಲ್ಲಿ ನಡೆದಿದ್ದ ಕ್ರಾಂತಿಯನ್ನು ಬ್ರಿಟಿಷರು “ಸಿಂಪಾಯಿ ದಂಗೆ’ ಎಂದು ಕರೆಯುತ್ತಿದ್ದರು. ಉಳಿದವರೂ ಹಾಗೆಂದೇ ಭಾವಿಸಿದ್ದರು. ಅದು ಸಿಪಾಯಿ ದಂಗೆಯಲ್ಲ, “ಪ್ರಥಮ ಸ್ವಾತಂತ್ರ್ಯ ಸಂಗ್ರಾಮ’ ಎಂದು ಮೊದಲು ಹೇಳಿದ್ದೇ ಸಾವರ್ಕರ್. The Indian War Of Independence  ಎಂಬ ಪುಸ್ತಕವನ್ನೇ ಬರೆದರು. ಆ ಪುಸ್ತಕ ಬ್ರಿಟಿಷರನ್ನು ಯಾವ ರೀತಿ ಭೀತಿಗೊಳಿಸಿತೆಂದರೆ ಅದರ ಮಾರಾಟವನ್ನೇ ನಿಷೇಧ ಮಾಡಿದರು.
ಇಂತಹ ಸಾವರ್ಕರ್ ಅವರನ್ನು ಬ್ರಿಟನ್ ಆಡಳಿತ 1910ರಲ್ಲಿ ಇಂಡಿಯಾ ಹೌಸ್ ನಲ್ಲೇ ಬಂಧಿಸಿತು.
ಅವರ ಬಗ್ಗೆ, ಅವರ ಚಟುವಟಿಕೆಯ ಬಗ್ಗೆ ಬ್ರಿಟಿಷರಿಗೆ ಎಂತಹ ಭಯವಿತ್ತೆಂದರೆ ಎರಡು ಜೀವಾವಧಿ ಶಿಕ್ಷೆ(50 ವರ್ಷ) ವಿಧಿಸಿ ಅಂಡಮಾನ್ ಜೈಲಿಗೆ ದಬ್ಬಿತು. ಸಾವರ್ಕರ್ ಅಲ್ಲೂ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಧರ್ಮದ ಆಧಾರದ ಮೇಲೆ ದೇಶ ಒಡೆಯಲು ಹೊರಟ ಮುಸ್ಲಿಮರನ್ನು ಮಟ್ಟಹಾಕುವ ಸಲುವಾಗಿ ಭಾರತವನ್ನು ಹಿಂದುರಾಷ್ಟ್ರವನ್ನಾಗಿ ಮಾಡಬೇಕೆಂದು ಸಾರ್ವಜನಿಕವಾಗಿ ಪ್ರತಿಪಾದಿಸಿದರು. ಹಿಂದು ರಾಷ್ಟ್ರವಾದವನ್ನು ಪ್ರತಿಪಾದಿಸಿ ಜೈಲಿನಲ್ಲೇ “Hindutva: Who is a hindu?‘ ಎಂಬ ಪುಸ್ತಕ ಬರೆದರು. ಹಿಂದುಯಿಸಂ, ಜೈನಿಸಂ, ಬುದ್ಧಿಸಂ ಹಾಗೂ ಸಿಖ್ಖಿಸಂ ಇವೆಲ್ಲವೂ ಒಂದೇ ಎಂದು ಮೊದಲು ಪ್ರತಿಪಾದಿಸಿದ್ದು, “ಅಖಂಡ ಭಾರತ’ದ ಕಲ್ಪನೆಯನ್ನು ಮೊದಲು ಕೊಟ್ಟಿದ್ದೂ ಇವರೇ.
1921ರಲ್ಲಿ ಷರತ್ತಿನ ಆಧಾರದ ಮೇಲೆ ಬಿಡುಗಡೆಯಾದ ಸಾವರ್ಕರ್, ಹಿಂದು ಮಹಾಸಭಾದ ಅಧ್ಯಕ್ಷರಾಗಿ ಸ್ವಧ ರ್ಮೀಯರನ್ನು ಒಗ್ಗೂಡಿಸಲು ಹೊರಟರು. ಕಾಂಗ್ರೆಸ್ ಮಾಡುತ್ತಿದ್ದ ಮುಸ್ಲಿಮರ ಓಲೈಕೆ ಹಾಗೂ ಮುಸ್ಲಿಮರ ವಿಭಜ ನಾವಾದಿ ಮನಸ್ಥಿತಿಯನ್ನು ಸಾವರ್ಕರ್ ಬಹಳ ಕಟುವಾಗಿ ವಿರೋಧಿಸಿದರು.
ನೀವು ಬಂದರೆ ನಿಮ್ಮ ಜತೆ
ಬರದಿದ್ದರೆ ನಿಮ್ಮನ್ನು ಬಿಟ್ಟು
ಅಡ್ಡವಾದರೆ ಮೊದಲು ನಿಮ್ಮನ್ನೇ ಮೆಟ್ಟಿ
ಸ್ವಾತಂತ್ರ್ಯ ಗಳಿಸುತ್ತೇವೆ….
ಎಂದು ಎಚ್ಚರಿಕೆಯನ್ನೇ ನೀಡಿದ್ದರು. ಅವರನ್ನು ನೀವು ಒಪ್ಪಿಬಿಡಿ, ಆದರೆ ತಾವು ನಂಬಿದ್ದ ಸಿದ್ಧಾಂತಗಳಿಗೆ ಅವರು ನಿಷ್ಠರಾಗಿದ್ದರು. ಬಹುತೇಕ ಟೋಪಿಧಾರಿ ಕಾಂಗ್ರೆಸ್ಸಿಗರ ಸ್ವಾತಂತ್ರ್ಯ ಹೋರಾಟಕ್ಕೆ ರಾಜಕೀಯ ಅಧಿಕಾರದ ಗುರಿಯಿತ್ತು. ಆದರೆ ಸಾವರ್ಕರ್ ಅವರಿಗೆ ರಾಜಕೀಯ ಮಹತ್ವಾಕಾಂಕ್ಷೆ ಎಂದೂ ಇರಲಿಲ್ಲ. ಅವರಿಗಿದ್ದ ಜನಪ್ರಿಯತೆಯ ಅಲೆಯಲ್ಲಿ ಚುನಾವಣೆಯಲ್ಲಿ ಆರಿಸಿ ಬರಬಹುದಿತ್ತು. ಸಾವರ್ಕರ್ ಗುರಿ ಈ ದೇಶದ ಸ್ವಾತಂತ್ರ್ಯ, ಈ  ನೆಲದ ನಂಬಿಕೆ, ಸಂಸ್ಕೃತಿಯ ರಕ್ಷಣೆಯಷ್ಟೇ ಆಗಿತ್ತು.
ಸಾವರ್ಕರ್  ಅವರು  ನಮ್ಮನ್ನಗಲಿ  ಫೆಬ್ರವರಿ 26 ಕ್ಕೆ  42 ವರ್ಷಗಳಾದವು.

Comments

Popular posts from this blog

“ಸರ್ವೇ ಜನಾಃ ಸುಖಿನೋ ಭವಂತು”

“ಸರ್ವೇ ಜನಾಃ ಸುಖಿನೋ ಭವಂತು” ಜಗತ್ತಿನಲ್ಲಿ ಎಲ್ಲರೂ ಸುಖವಾಗಿರಲಿ. ”ಲೋಕಾಃ ಸಮಸ್ತಾಃ ಸುಖಿನೋ ಭವಂತು”ಎಲ್ಲ ಲೋಕಗಳೂ ಸುಖವಾಗಿರಲಿ”ಎಂದು ಬಯಸುವ ಭವ್ಯ ಸಂಸ್ಕೃತಿ ನಮ್ಮದು. ಜಗತ್ತಿನಲ್ಲಿ ಸದಾ ಶಾಂತಿಯನ್ನು ಬಯಸಿದವರು ನಾವು.ತೀರ ಅನಿವಾರ್ಯವಾದಾಗ ಶಸ್ತ್ರವನ್ನು ಹಿಡಿದಿದ್ದೇವೆ.”ದಂಡಂ ದಶಗುಣಂ” ಎಂದು ವೈರಿಗಳ ಅಟ್ಟಹಾಸವನ್ನು ನಿಯಂತ್ರಿಸಿದ್ದೇವೆ. ಶಾಂತಿ ಹಾಗೂ ಅಹಿಂಸೆ ನಮ್ಮ ಪರಮಧರ್ಮ.”ಅಹಿಂಸಾ ಪರಮೋ ಧರ್ಮಃ” ಎಂದು ಸಾರಿದವರು ನಾವು.ಇದಕ್ಕೆ ಮೂಲಪ್ರೇರಣೆ ನಮ್ಮ ವೇದ-ಶಾಸ್ತ್ರ-ಪುರಾಣ ಮುಂತಾದ ಧರ್ಮಗ್ರಂಥಗಳಲ್ಲಿರುವ ಶಾಂತಿ ಹಾಗೂ ಅಹಿಂಸಾ ತತ್ವಗಳು.ಶಾಂತಿಮಂತ್ರಗಳು ಕೇವಲ ನಮಗಷ್ಟೇ ಅಲ್ಲ,ಇಡೀ ಪ್ರಪಂಚ ಶಾಂತವಾಗಿರಲೆಂದು ಆಶಿಸುತ್ತವೆ. ಕೇವಲ ಮನುಷ್ಯನಷ್ಟೇ ಶಾಂತವಾಗಿದ್ದರೆ ಸಾಲದು.ಪರಮಾತ್ಮ,ಪ್ರಕೃತಿ,ವನೌಷಧಿ ಹೀಗೆ ಎಲ್ಲವೂ ಸದಾ ಶಾಂತವಾಗಿರಲೆಂದು ಶಾಂತಿಮಂತ್ರಗಳು ಬಯಸುತ್ತವೆ. ಅಂತಹ ಶಾಂತಿಮಂತ್ರಗಳ ಕಿರು ಪರಿಚಯವನ್ನು ಮಾಡಿಕೊಳ್ಳೋಣ.. ಓಂ ನಮೋ ಬ್ರಹ್ಮಣೇ ನಮೋ ಅಸ್ತ್ವಗ್ನಯೇ ನಮಃ ಪೃಥಿವ್ಯೈ ನಮ ಓಷಧೀಭ್ಯಃ | ನಮೋ ವಾಚೇ ನಮೋ ವಾಚಸ್ಪತಯೇ ನಮೋ ವಿಷ್ಣವೇ ಬೃಹತೇ ಕರೋಮಿ || ಓಂ ಶಾಂತಿಃ ಶಾಂತಿಃ ಶಾಂತಿಃ ಬ್ರಹ್ಮನಿಗೆ ನಮಸ್ಕಾರ,ಅಗ್ನಿಗೆ ನಮಸ್ಕಾರ,ಸಸ್ಯಗಳಿಗೆ ನಮಸ್ಕಾರ,ಮಾತಿಗೆ ನಮಸ್ಕಾರ,ಮಾತಿನ ಒಡೆಯನಿಗೆ ನಮಸ್ಕಾರ,ಸರ್ವಾಂತರ್ಯಾಮಿ ಹಾಗೂ ಸಮರ್ಥನಾದ ವಿಷ್ಣುವಿಗೆ ನಮಸ್ಕಾರ. ಓಂ ಶಾಂತಿಃ ಶಾಂತಿಃ ಶಾಂತಿಃ ಓಂ ಸಹನಾವವತ...

ದಶರಥ

ಇಕ್ಷ್ವಾಕುವಂಶದ ಪ್ರಸಿದ್ಧ ರಾಜ ದಶರಥ.ವಾಲ್ಮೀಕಿರಾಮಾಯಣದ ನಾಯಕ,ಮರ್ಯಾದಾಪುರುಷೋತ್ತಮ,ಪ್ರಾತಃಸ್ಮರಣೀಯ ಶ್ರೀರಾಮಚಂದ್ರನ ತಂದೆ.ದಶರಥನ ಹೆಸರಿನಿಂದಲೇ ರಾಮ "ದಾಶರಥಿರಾಮ" ಎಂದು ವಿಖ್ಯಾತನಾದ.ಅಜಮಹಾರಾಜನ ಪುತ್ರ ದಶರಥ,ಆತನ ತಾಯಿಯ ಹೆಸರು ಇಂದುಮತಿ. ಧೀರತೆಗೆ,ಧರ್ಮನಿಷ್ಟೆಗೆ ಹೆಸರಾಗಿದ್ದ ಅಯೋಧ್ಯೆಯ ರಾಜ ದಶರಥ.ಆದರೆ ಅತಿಯಾದ ವಿಷಯಾಸಕ್ತಿಗಳಿಂದ ಬದುಕನ್ನೇ ಅನರ್ಥ ಮಾಡಿಕೊಂಡ.ಭಾರ್ಗವರಿಂದ ಕಾಡಿ-ಬೇಡಿ ಕಲಿತಿದ್ದ ಶಬ್ದವೇಧಿ ವಿದ್ಯೆಯನ್ನು ಪರೀಕ್ಷಿಸಲು ಹೋಗಿ,ಅನ್ಯಾಯವಾಗಿ ಶ್ರವಣಕುಮಾರನನ್ನು ಕೊಂದು ಆತನ ಪಾಲಕರಿಂದ ಶಾಪಗ್ರಸ್ತನಾಗಿ ಪುತ್ರಶೋಕದಿಂದ ಪರಿತಪಿಸುತ್ತಾ ಇಹಲೋಕ ತ್ಯಜಿಸಿದ.ಲೋಕದ ಒಡೆಯನ ತಂದೆಯಾದರೂ ದುಃಖ ತಪ್ಪಲಿಲ್ಲ,ಮನೋನಿಗ್ರಹಿಯಾದರೂ  ಕಾಮನೆಗಳನ್ನು ಬಿಡಲಿಲ್ಲ.ರಾಮಾಯಣದ ದುರಂತನಾಯಕ ದಶರಥನೆಂದರೆ ಅತಿಶಯೋಕ್ತಿಯಾಗಲಾರದು. ಕೌಸಲ್ಯೆ,ಸುಮಿತ್ರೆ,ಕೈಕೇಯಿ ದಶರಥನ ಪ್ರಸಿದ್ಧ ಪತ್ನಿಯರು.ಆದರೆ ವಾಸ್ತವದಲ್ಲಿ ದಶರಥನಿಗೆ ಹಲವು ಪತ್ನಿಯರಿದ್ದರೆಂದು ಮೂಲರಾಮಾಯಣದ ಸಂಭಾಷಣೆಗಳಿಂದ ತಿಳಿಯಬಹುದು."ರಾಜಾನೋ ಬಹುವಲ್ಲಭಾಃ" ಎಂಬುದು ಸರಿ,ಆದರೆ ಅನೇಕ ಪತ್ನಿಯರಿದ್ದರೆ ರಾಜನ ಪರಿಸ್ಥಿತಿ ಎಷ್ಟು ದಯನೀಯವಾಗಿರಬಹುದೆಂಬುದಕ್ಕೆ ದಶರಥ ಮಹಾರಾಜ ಸ್ಪಷ್ಟ ಉದಾಹರಣೆ. ವಾಲ್ಮೀಕಿರಾಮಾಯಣದ ಒಂದು ಪ್ರಸಂಗ.ಅನುಸೂಯೆಯೊಂದಿಗೆ ಮಾತಾಡುತ್ತ ಸೀತೆ,"ರಾಮ ತನ್ನ ಮಾತೆ ಕೌಸಲ್ಯೆಗೆ ಎಷ್ಟು ಗೌರವವನ್ನು ನೀಡ...

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ

ದಟ್ಟವಾದ ಕಾಡಿನಲ್ಲಿ, ಒಂದು ಗರ್ಭವತಿ ಜಿಂಕೆಯು ತನ್ನ ಮಗುವಿಗೆ ಜನ್ಮ ಕೊಡುವುದಕ್ಕೆ ನದಿಯ ತೀರದಲ್ಲಿ ಹುಲ್ಲಿರುವ ಸಮತಟ್ಟಾದ, ಸುರಕ್ಷಿತವಾದ (!) ಸ್ಥಳವನ್ನು ಹುಡುಕಿ ಕೊಂಡಿತ್ತು. ಪ್ರಸವ ವೇದನೆ ಶುರುವ...