Skip to main content

ಹಾಕಿಂಗ್ : ಮೂರು ಸಂಗತಿಗಳು... ✍ರೋಹಿತ್ ಚಕ್ರತೀರ್ಥ , ವಿಶ್ವವಾಣಿ 15 ಮಾರ್ಚ್ 2018

(1) ಕೊನೆಗೂ ಉಳಿದದ್ದು

1988ರಲ್ಲಿ ಸ್ಟೀಫನ್ ಹಾಕಿಂಗ್, "ಕಾಲದ ಸಂಕ್ಷಿಪ್ತ ಚರಿತ್ರೆ" ಎಂಬ ಜನಪ್ರಿಯ ವಿಜ್ಞಾನ ಮಾದರಿಯ ಒಂದು ಪುಸ್ತಕ ಬರೆದರು. ಮೊದಮೊದಲಿಗೆ ಅವರಿಂದ ಪುಸ್ತಕ ಬರೆಸಲು ಬಹಳ ಉತ್ಸಾಹ ತೋರಿಸಿದ ಪ್ರಕಾಶಕ, ಕೃತಿಯ ಮೊದಲ ಡ್ರಾಫ್ಟ್ ನೋಡಿದ ಮೇಲೆ ಯಾಕೋ ಮೌನವಾಗಿದ್ದುಬಿಟ್ಟ. ಬಹಳ ದಿನಗಳಾದರೂ ಅವನಿಂದ ಪ್ರತಿಕ್ರಿಯೆ ಬಾರದೇ ಇದ್ದಾಗ ಸ್ವತಃ ಸ್ಟೀಫನ್ ತನ್ನ ಪುಸ್ತಕದ ಬಗ್ಗೆ ಅವನಲ್ಲಿ ವಿಚಾರಿಸಿದರು. ಆಗ ಆತ, "ಪ್ರೊಫೆಸರ್, ನಿಮ್ಮ ಪುಸ್ತಕವೇನೋ ಅದ್ಭುತವಾಗಿದೆ. ಆದರೆ, ಅದನ್ನು ಪ್ರಕಟಿಸಿದರೆ ನಾನು ಕೈ ಸುಟ್ಟುಕೊಳ್ಳುವುದು ಖಂಡಿತ. ಯಾಕೆಂದರೆ, ಪ್ರತಿ ಪುಟದಲ್ಲೂ ಒಂದೆರಡು ಎನ್ನುವಂತೆ ಇಡೀ ಪುಸ್ತಕದಲ್ಲಿ ನೂರಕ್ಕೂ ಹೆಚ್ಚು ಸೂತ್ರಗಳನ್ನು ಬರೆದಿದ್ದೀರಿ. ನಮ್ಮ ಓದುಗರು ಇಂತಹ ಪುಸ್ತಕಗಳನ್ನು ಕಣ್ಣೆತ್ತಿಯೂ ನೋಡುವುದಿಲ್ಲ. ಹಾಗಾಗಿ, ಅವನ್ನು ಕಮ್ಮಿ ಮಾಡಬೇಕು. ಒಂದೇ ಒಂದು ಸೂತ್ರವೂ ಇಲ್ಲದ ಪುಸ್ತಕ ಬರೆದುಕೊಟ್ಟರೆ ಮಾತ್ರ ನಾನು ಪ್ರಕಟಿಸುತ್ತೇನೆ!" ಎಂದ.

ಸ್ಟೀಫನ್ ತಲೆಗೆ ಮಂಜುಗಡ್ಡೆ ಸುರಿದಂತಾಯಿತು. ಖಗೋಳವಿಜ್ಞಾನ, ಆಧುನಿಕ ಭೌತಶಾಸ್ತ್ರ, ಕ್ವಾಂಟಮ್ ವಿಜ್ಞಾನದಂತಹ ವಿಷಯಗಳನ್ನು ಸೂತ್ರ ಬರೆಯದೆ ವಿವರಿಸುವುದೆ? ಎಂದು ತಲೆಗೆ ಕೈ ಹೊತ್ತು ಕೂತರು. ಆದರೆ, ಧೃತಿಗೆಡಲಿಲ್ಲ. ಪ್ರಕಾಶಕನ ಕೋರಿಕೆಯನ್ನು ಸವಾಲಾಗಿ ಸ್ವೀಕರಿಸಿದರು. ಸೂತ್ರಗಳ ಸಂತೆಯಾಗಿದ್ದ ತನ್ನ ಪುಸ್ತಕವನ್ನು ಬದಿಗಿಟ್ಟು, ಮತ್ತೆ ಹೊಸದಾಗಿ ಕಾಲದ ಕತೆ ಹೇಳಲು ಕೂತರು. ಕೊನೆಗೂ ಪ್ರಕಾಶಕನಿಗೆ ಮೆಚ್ಚಿಗೆಯಾಗುವಂತೆ ಪುಸ್ತಕ ಬರೆದುಕೊಟ್ಟರು. ಅದನ್ನು ಆತ ಸಂತೋಷದಿಂದ ಪ್ರಕಟಿಸಿದ ಎಂದು ಬೇರೆ ಹೇಳಬೇಕಿಲ್ಲ ಅಲ್ಲವೆ? ಪ್ರಕಟವಾದ 20 ವರ್ಷಗಳಲ್ಲಿ ಒಟ್ಟು 10 ಮಿಲಿಯ ಪ್ರತಿಗಳು ಮಾರಾಟವಾಗಿ ಹಾಕಿಂಗ್ ಪುಸ್ತಕ ದಾಖಲೆ ಬರೆಯಿತು. ವಿಜ್ಞಾನ ಪುಸ್ತಕ ಟಾಪ್‍ಟೆನ್ ಪುಸ್ತಕಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುವುದೇ ಇಲ್ಲ ಎಂಬ ನಂಬಿಕೆಯನ್ನು "ಕಾಲದ ಸಂಕ್ಷಿಪ್ತ ಚರಿತ್ರೆ" ಅಳಿಸಿಹಾಕಿತು.

"ಅವನು ಹೇಳಿದಂತೆ ಎಲ್ಲಾ ಸೂತ್ರಗಳನ್ನು ಮೂಟೆ ಕಟ್ಟಿ ಅಟ್ಟಕ್ಕೊಗೆದು ಅವುಗಳಿಲ್ಲದ ಪುಸ್ತಕವೇನೋ ಬರೆದೆ. ಆದರೆ, ಒಂದು - ಕೇವಲ ಒಂದು ಸೂತ್ರವನ್ನು ಮಾತ್ರ ತೆಗೆದುಹಾಕಲಿಕ್ಕಾಗಲಿಲ್ಲ. ಅದುವೇ ಐನ್‍ಸ್ಟೈನ್ ಪ್ರಣೀತ e = mc^2 " ಎಂದು ಹೇಳಿದ್ದಾರೆ ಹಾಕಿಂಗ್. ಇಡೀ ಪುಸ್ತಕದಲ್ಲಿ ಉಳಿದುಬಿಟ್ಟ ಸೂತ್ರ ಅದೊಂದೇ!

***

(2) ಸತ್ಯದ ತಾಕತ್ತು

ಇಂಗ್ಲೆಂಡಿನ ರಾಯಲ್ ಸೊಸೈಟಿಯಲ್ಲಿ ಒಂದು ದಿನ ಫ್ರೊಫೆಸರ್ ಫ್ರೆಡ್ ಹಾಯ್ಲ್ ಅವರ ಉಪನ್ಯಾಸ ಏರ್ಪಾಡಾಗಿತ್ತು. ಅವರೂ ಅವರ ಶಿಷ್ಯನಾಗಿದ್ದ ಜಯಂತ ನಾರ್ಲೀಕರ್‍ರೂ ಅಂದಿನ ಉಪನ್ಯಾಸದಲ್ಲಿ ವಿಶ್ವದ ಆಗುಹೋಗುಗಳ ಬಗ್ಗೆ ತಾವು ಇದುವರೆಗೆ ಮಾಡಿರುವ ಸಂಶೋಧನೆಗಳನ್ನು ಸಭಿಕರೆದುರು ಪ್ರಸ್ತುತಪಡಿಸಿದರು. ಹಾಯ್ಲ್ ಆ ಕಾಲದಲ್ಲಿ ಖಗೋಳವಿಜ್ಞಾನದಲ್ಲಿ ಜಗತ್ತಿನ ವಿದ್ವತ್ ವಲಯದಲ್ಲೇ ಬಹುದೊಡ್ಡ ಹೆಸರು. ಅವರ ಭಾಷಣ ಆಯೋಜನೆಯಾಗುತ್ತದೆ ಎಂದರೆ ನೂರಾರು ಮೈಲಿಯಿಂದ ಪ್ರಯಾಣ ಮಾಡಿ ಬರುವ ಆಸಕ್ತರೂ ಆ ಕಾಲದಲ್ಲಿದ್ದರು. ಪ್ರೊ. ಹಾಯ್ಲ್ ಹೇಳಿದ, ಬರೆದ ವಿಷಯಗಳೆಲ್ಲವೂ ಹಲವು ತಿಂಗಳ ಕಾಲ ಪಂಡಿತವಲಯದಲ್ಲಿ ಚರ್ಚೆಯಾಗುತ್ತಿದ್ದವು. ಅಂಥ ವಿದ್ವಾಂಸನ ಭಾಷಣ ಆಯೋಜನೆಯಾಗಿದೆ, ಅದೂ ರಾಯಲ್ ಸೊಸೈಟಿಯಲ್ಲಿ - ಎಂದರೆ ಕೇಳಬೇಕೆ? ಊಹಿಸಿದಂತೆಯೇ, ಅನೇಕ ವಿದ್ವಾಂಸರು ಕಿಕ್ಕಿರಿದು ತುಂಬಿಕೊಂಡಿದ್ದ ಸಭೆ ಅದು. ಈ ವಿಶ್ವದಲ್ಲಿ ಹೊಸ ವಸ್ತು ಸೃಷ್ಟಿಯಾಗುತ್ತದೆ ಅಥವಾ ಇದುವರೆಗೆ ಇದ್ದದ್ದು ನಾಶವಾಗುತ್ತದೆ ಎನ್ನುವುದು ತಪ್ಪು ಕಲ್ಪನೆ. ಈ ಜಗತ್ತು ಎಂದೆಂದೂ ಹೀಗೇ ಇರುತ್ತದೆ - ಎನ್ನುವುದು ಪ್ರೊ. ಹಾಯ್ಲ್ ಅವರ ಭಾಷಣದ ಸಾರ. ಅದಕ್ಕೆ ಪೂರಕವಾಗುವಂತೆ ಹಲವು ನಿದರ್ಶನಗಳನ್ನು ಹಾಯ್ಲ್ ತನ್ನ ಬತ್ತಳಿಕೆಯಿಂದ ತೆಗೆದುತೋರಿಸಿದರು.

ಸಭೆ ಪ್ರೊ. ಹಾಯ್ಲ್ ಅವರ ಮಾತುಗಳನ್ನು ತುಂಬ ಆಸಕ್ತಿಯಿಂದ ಕೇಳುತ್ತ ತಲೆಯಾಡಿಸುತ್ತಿದ್ದಾಗ, ಪಿಎಚ್‍ಡಿ ಸಂಶೋಧನೆಗೆ ಅದಾಗಷ್ಟೇ ವಿಶ್ವವಿದ್ಯಾಲಯದಲ್ಲಿ ಹೆಸರು ನೋಂದಾಯಿಸಿಕೊಂಡಿದ್ದ ವಿದ್ಯಾರ್ಥಿಯೊಬ್ಬ ಎದ್ದುನಿಂತ. "ಕ್ಷಮಿಸಿ ಪ್ರೊಫೆಸರ್ ಹಾಯ್ಲ್ ಅವರೇ, ನಿಮ್ಮ ಸಿದ್ಧಾಂತದಲ್ಲಿ ತಪ್ಪುಗಳಿವೆ" ಎಂದು, ಕಾರ್ಮೋಡದ ನಡುವಿನ ಮಿಂಚಿನಂತೆ, ಘೋಷಿಸಿದ. ಆ ತರುಣನ ಮಾತುಗಳನ್ನು ಕೇಳಿ ಇಡೀ ಸಭೆ ಸ್ತಂಭೀಭೂತವಾಯಿತು. ಹಾಯ್ಲ್ ಅವರ ಮುಖ ಕಪ್ಪಿಟ್ಟಿತು. ಆದರೆ ಅದನ್ನೆಲ್ಲ ಗಣನೆಗೆ ತೆಗದುಕೊಳ್ಳದ ಆತ ತನ್ನ ಹೆಸರು ಸ್ಟೀಫನ್ ಹಾಕಿಂಗ್ ಎಂದು ಪರಿಚಯಿಸಿಕೊಂಡು ನಂತರ ಹಾಯ್ಲ್‍ರ ಸಿದ್ಧಾಂತ ಯಾಕೆ ಮತ್ತು ಹೇಗೆ ತಪ್ಪು ಎಂಬುದನ್ನು ವಿವರಿಸುತ್ತಾಹೋದ. ಸಭೆ ಬರಖಸ್ತಾಯಿತು. ಹಾಯ್ಲ್ ಮುಖ ಊದಿಸಿಕೊಂಡು ದಢದಢನೆ ನಡೆಯುತ್ತ ಹೋದರು. ವಿಷಯ ಪ್ರೊ. ಡೆನ್ನಿಸ್ ಶಾಮ ಅವರನ್ನು ತಲುಪಿತು. ಅವರು ಹಾಕಿಂಗ್‍ರ ಪಿಎಚ್‍ಡಿ ಗೈಡ್. ಸರಿ, ಅವರಿಂದ ಹಾಕಿಂಗ್‍ರಿಗೆ ಬುಲಾವ್ ಬಂತು. ಇಂಗ್ಲೆಂಡ್ ಮಾತ್ರವಲ್ಲ, ಇಡೀ ಜಗತ್ತಿನ ವಿದ್ವತ್ ವಲಯದಲ್ಲಿ ಹೆಸರು ಮಾಡಿದ್ದ ಹಾಯ್ಲ್ ಅವರನ್ನು ಎದುರುಹಾಕಿಕೊಳ್ಳುವ ಧೈರ್ಯ ಮತ್ತು ಆಸಕ್ತಿ ಶಾಮ ಅವರಿಗೆ ಇರಲಿಲ್ಲ. ನಿರೀಕ್ಷಿಸಿದಂತೆಯೇ ಗುರುವಿನಿಂದ ಶಿಷ್ಯನಿಗೆ ಮಂಗಳಾರತಿಯಾಯಿತು. "ಇನ್ನೊಬ್ಬರ ವಾದವನ್ನು ಅಲ್ಲಗಳೆಯುವುದು ಪಾಂಡಿತ್ಯ ಅಲ್ಲ. ನಿನಗೆ ತಾಕತ್ತಿದ್ದರೆ ನಿನ್ನದೇ ಸಿದ್ಧಾಂತವನ್ನು ಸಾಧಿಸಿ ತೋರಿಸು. ಬೇರೆಯವರನ್ನು ಟೀಕಿಸುವುದಕ್ಕಿಂತ ನಿನ್ನ ಕೆಲಸ ಮಾಡಿ ಜಗತ್ತಿನ ಮುಂದಿಡು. ಆದರೆ ನೆನಪಿರಲಿ - ಮಾಡಿದ ಸಂಶೋಧನೆಯಲ್ಲಿ ಸ್ವಂತಿಕೆ ಇರಲಿ. ಹತ್ತು ಮೂಲಗಳಿಂದ ಭಟ್ಟಿ ಇಳಿಸುವುದು ಸಂಶೋಧನೆ ಅಲ್ಲ" ಎಂದು ಶಾಮ ಗುಡುಗಿದರು.

ಅದಾಗಿ ಮೂರು ವರ್ಷಗಳ ನಂತರ ತನ್ನ ಪಿಎಚ್‍ಡಿ ಪ್ರಬಂಧವನ್ನು ಒಪ್ಪಿಸಿದಾಗ ಸ್ಟೀಫನ್ ಹಾಕಿಂಗ್ ಹೇಳಿದ್ದು: "ಇದು ನನ್ನದೇ ಸಂಶೋಧನೆ. ನೂರಕ್ಕೆ ನೂರರಷ್ಟು ನನ್ನದೇ ಚಿಂತನೆ. ಯಾವ ಮೂಲದಿಂದಲೂ ಭಟ್ಟಿ ಇಳಿಸಿಲ್ಲ. ತಪ್ಪು ವಾದವನ್ನು ತಳ್ಳಿಹಾಕುವುದಷ್ಟೇ ಅಲ್ಲ, ಸರಿಯಾದದ್ದನ್ನು ಮುಂದಿಟ್ಟಿದ್ದೇನೆ".

***

(3) ವಾಸ್ತವವಾಗಬಹುದಾದ ಕತೆ

ಹಾಕಿಂಗ್ ಅವರ ಆಸಕ್ತಿಯ ಕ್ಷೇತ್ರಗಳು ಹಲವು. ಈ ವಿಶ್ವದಲ್ಲಿ ಭೂಮಿಯೊಂದೇ ಅಲ್ಲ; ಅದರಾಚೆಗಿರುವ ಹಲವು ಗ್ರಹಗಳಲ್ಲಿ ಜೀವಿಗಳಿರುವ ಸಾಧ್ಯತೆ ಇದೆ ಎನ್ನುವುದು ಅವರ ನುಡಿ. ಒಂದಲ್ಲ ಒಂದು ದಿನ ಮನುಷ್ಯನಿಗೆ ಅನ್ಯಗ್ರಹ ಜೀವಿಗಳ ಜೊತೆ ಸಂಪರ್ಕ ಮಾಡುವುದು ಸಾಧ್ಯವಾಗಲಿದೆ ಎನ್ನುವ ಆಸೆ ಅವರದಾಗಿತ್ತು! ಹಾಗೆಯೇ ಇನ್ನು ಕೆಲ ವರ್ಷಗಳಲ್ಲಿ ಕೃತಕ ಬುದ್ಧಿಯ ರೋಬೋಟ್‍ಗಳು ಬುದ್ಧಿವಂತಿಕೆಯ ವಿಷಯದಲ್ಲಿ ಮನುಷ್ಯನನ್ನು ಮೀರಿಸಿ ಮುಂದೋಡಲಿವೆ ಎಂದು ಹಾಕಿಂಗ್ ಭವಿಷ್ಯ ನುಡಿದಿದ್ದಾರೆ. ಅವರು ಹೇಳುತ್ತಿದ್ದ ಒಂದು ಪುಟ್ಟ ಕತೆ ಇದು:

ಮನುಷ್ಯ ತನ್ನ ಎಲ್ಲಾ ಬುದ್ಧಿವಂತಿಕೆಯನ್ನು ಧಾರೆ ಎರೆದು ಒಂದು ಕಂಪ್ಯೂಟರ್ ಅನ್ನು ಸೃಷ್ಟಿ ಮಾಡಿದನಂತೆ. ಅದು ಅವನು ಕೇಳಿದ ಯಾವ ಪ್ರಶ್ನೆಗಾದರೂ ಉತ್ತರ ಹೇಳಬಲ್ಲ ಸರ್ವಶಕ್ತ ಕಂಪ್ಯೂಟರ್.

"ಕಂಪ್ಯೂಟರೇ, ದೇವರಿದ್ದಾನೆಯೆ?", ಮನುಷ್ಯ ಕೇಳಿದ.

"ಹಿಂದೆ ಇರಲಿಲ್ಲ; ಆದರೆ ಈಗ ಸೃಷ್ಟಿಯಾಗಿದ್ದಾನೆ" ಎಂದಿತು ಕಂಪ್ಯೂಟರ್.

ತನ್ನನ್ನೇ ತಾನು ದೇವರ ಮಟ್ಟಕ್ಕೇರಿಸಿಕೊಂಡಿದೆ ಇದು ಎಂದು ಗಾಬರಿಬಿದ್ದ ಮನುಷ್ಯ ಕೂಡಲೇ ಕಂಪ್ಯೂಟರನ್ನು ಆಫ್ ಮಾಡಲು ಹೋದನಂತೆ. ಆದರೆ, ಅದು ಏನೇನು ಮಾಡಿದರೂ ಆಫ್ ಆಗಲಿಲ್ಲ. ಗಹಗಹಿಸುವ ನಗುವಿನ ಅಲೆಗಳು ಸುತ್ತಲೂ ತುಂಬಿಕೊಂಡವು!

***

ಹಾಕಿಂಗ್ ಕುರಿತ ಇನ್ನಷ್ಟು ವಿವರಗಳಿಗಾಗಿ ಇಂದಿನ ಹೊಸ ದಿಗಂತ (ಪುಟ 7) ಮತ್ತು ಉದಯವಾಣಿ (ಪುಟ 8) ನೋಡಬಹುದು.

Comments

Popular posts from this blog

“ಸರ್ವೇ ಜನಾಃ ಸುಖಿನೋ ಭವಂತು”

“ಸರ್ವೇ ಜನಾಃ ಸುಖಿನೋ ಭವಂತು” ಜಗತ್ತಿನಲ್ಲಿ ಎಲ್ಲರೂ ಸುಖವಾಗಿರಲಿ. ”ಲೋಕಾಃ ಸಮಸ್ತಾಃ ಸುಖಿನೋ ಭವಂತು”ಎಲ್ಲ ಲೋಕಗಳೂ ಸುಖವಾಗಿರಲಿ”ಎಂದು ಬಯಸುವ ಭವ್ಯ ಸಂಸ್ಕೃತಿ ನಮ್ಮದು. ಜಗತ್ತಿನಲ್ಲಿ ಸದಾ ಶಾಂತಿಯನ್ನು ಬಯಸಿದವರು ನಾವು.ತೀರ ಅನಿವಾರ್ಯವಾದಾಗ ಶಸ್ತ್ರವನ್ನು ಹಿಡಿದಿದ್ದೇವೆ.”ದಂಡಂ ದಶಗುಣಂ” ಎಂದು ವೈರಿಗಳ ಅಟ್ಟಹಾಸವನ್ನು ನಿಯಂತ್ರಿಸಿದ್ದೇವೆ. ಶಾಂತಿ ಹಾಗೂ ಅಹಿಂಸೆ ನಮ್ಮ ಪರಮಧರ್ಮ.”ಅಹಿಂಸಾ ಪರಮೋ ಧರ್ಮಃ” ಎಂದು ಸಾರಿದವರು ನಾವು.ಇದಕ್ಕೆ ಮೂಲಪ್ರೇರಣೆ ನಮ್ಮ ವೇದ-ಶಾಸ್ತ್ರ-ಪುರಾಣ ಮುಂತಾದ ಧರ್ಮಗ್ರಂಥಗಳಲ್ಲಿರುವ ಶಾಂತಿ ಹಾಗೂ ಅಹಿಂಸಾ ತತ್ವಗಳು.ಶಾಂತಿಮಂತ್ರಗಳು ಕೇವಲ ನಮಗಷ್ಟೇ ಅಲ್ಲ,ಇಡೀ ಪ್ರಪಂಚ ಶಾಂತವಾಗಿರಲೆಂದು ಆಶಿಸುತ್ತವೆ. ಕೇವಲ ಮನುಷ್ಯನಷ್ಟೇ ಶಾಂತವಾಗಿದ್ದರೆ ಸಾಲದು.ಪರಮಾತ್ಮ,ಪ್ರಕೃತಿ,ವನೌಷಧಿ ಹೀಗೆ ಎಲ್ಲವೂ ಸದಾ ಶಾಂತವಾಗಿರಲೆಂದು ಶಾಂತಿಮಂತ್ರಗಳು ಬಯಸುತ್ತವೆ. ಅಂತಹ ಶಾಂತಿಮಂತ್ರಗಳ ಕಿರು ಪರಿಚಯವನ್ನು ಮಾಡಿಕೊಳ್ಳೋಣ.. ಓಂ ನಮೋ ಬ್ರಹ್ಮಣೇ ನಮೋ ಅಸ್ತ್ವಗ್ನಯೇ ನಮಃ ಪೃಥಿವ್ಯೈ ನಮ ಓಷಧೀಭ್ಯಃ | ನಮೋ ವಾಚೇ ನಮೋ ವಾಚಸ್ಪತಯೇ ನಮೋ ವಿಷ್ಣವೇ ಬೃಹತೇ ಕರೋಮಿ || ಓಂ ಶಾಂತಿಃ ಶಾಂತಿಃ ಶಾಂತಿಃ ಬ್ರಹ್ಮನಿಗೆ ನಮಸ್ಕಾರ,ಅಗ್ನಿಗೆ ನಮಸ್ಕಾರ,ಸಸ್ಯಗಳಿಗೆ ನಮಸ್ಕಾರ,ಮಾತಿಗೆ ನಮಸ್ಕಾರ,ಮಾತಿನ ಒಡೆಯನಿಗೆ ನಮಸ್ಕಾರ,ಸರ್ವಾಂತರ್ಯಾಮಿ ಹಾಗೂ ಸಮರ್ಥನಾದ ವಿಷ್ಣುವಿಗೆ ನಮಸ್ಕಾರ. ಓಂ ಶಾಂತಿಃ ಶಾಂತಿಃ ಶಾಂತಿಃ ಓಂ ಸಹನಾವವತ...

ದಶರಥ

ಇಕ್ಷ್ವಾಕುವಂಶದ ಪ್ರಸಿದ್ಧ ರಾಜ ದಶರಥ.ವಾಲ್ಮೀಕಿರಾಮಾಯಣದ ನಾಯಕ,ಮರ್ಯಾದಾಪುರುಷೋತ್ತಮ,ಪ್ರಾತಃಸ್ಮರಣೀಯ ಶ್ರೀರಾಮಚಂದ್ರನ ತಂದೆ.ದಶರಥನ ಹೆಸರಿನಿಂದಲೇ ರಾಮ "ದಾಶರಥಿರಾಮ" ಎಂದು ವಿಖ್ಯಾತನಾದ.ಅಜಮಹಾರಾಜನ ಪುತ್ರ ದಶರಥ,ಆತನ ತಾಯಿಯ ಹೆಸರು ಇಂದುಮತಿ. ಧೀರತೆಗೆ,ಧರ್ಮನಿಷ್ಟೆಗೆ ಹೆಸರಾಗಿದ್ದ ಅಯೋಧ್ಯೆಯ ರಾಜ ದಶರಥ.ಆದರೆ ಅತಿಯಾದ ವಿಷಯಾಸಕ್ತಿಗಳಿಂದ ಬದುಕನ್ನೇ ಅನರ್ಥ ಮಾಡಿಕೊಂಡ.ಭಾರ್ಗವರಿಂದ ಕಾಡಿ-ಬೇಡಿ ಕಲಿತಿದ್ದ ಶಬ್ದವೇಧಿ ವಿದ್ಯೆಯನ್ನು ಪರೀಕ್ಷಿಸಲು ಹೋಗಿ,ಅನ್ಯಾಯವಾಗಿ ಶ್ರವಣಕುಮಾರನನ್ನು ಕೊಂದು ಆತನ ಪಾಲಕರಿಂದ ಶಾಪಗ್ರಸ್ತನಾಗಿ ಪುತ್ರಶೋಕದಿಂದ ಪರಿತಪಿಸುತ್ತಾ ಇಹಲೋಕ ತ್ಯಜಿಸಿದ.ಲೋಕದ ಒಡೆಯನ ತಂದೆಯಾದರೂ ದುಃಖ ತಪ್ಪಲಿಲ್ಲ,ಮನೋನಿಗ್ರಹಿಯಾದರೂ  ಕಾಮನೆಗಳನ್ನು ಬಿಡಲಿಲ್ಲ.ರಾಮಾಯಣದ ದುರಂತನಾಯಕ ದಶರಥನೆಂದರೆ ಅತಿಶಯೋಕ್ತಿಯಾಗಲಾರದು. ಕೌಸಲ್ಯೆ,ಸುಮಿತ್ರೆ,ಕೈಕೇಯಿ ದಶರಥನ ಪ್ರಸಿದ್ಧ ಪತ್ನಿಯರು.ಆದರೆ ವಾಸ್ತವದಲ್ಲಿ ದಶರಥನಿಗೆ ಹಲವು ಪತ್ನಿಯರಿದ್ದರೆಂದು ಮೂಲರಾಮಾಯಣದ ಸಂಭಾಷಣೆಗಳಿಂದ ತಿಳಿಯಬಹುದು."ರಾಜಾನೋ ಬಹುವಲ್ಲಭಾಃ" ಎಂಬುದು ಸರಿ,ಆದರೆ ಅನೇಕ ಪತ್ನಿಯರಿದ್ದರೆ ರಾಜನ ಪರಿಸ್ಥಿತಿ ಎಷ್ಟು ದಯನೀಯವಾಗಿರಬಹುದೆಂಬುದಕ್ಕೆ ದಶರಥ ಮಹಾರಾಜ ಸ್ಪಷ್ಟ ಉದಾಹರಣೆ. ವಾಲ್ಮೀಕಿರಾಮಾಯಣದ ಒಂದು ಪ್ರಸಂಗ.ಅನುಸೂಯೆಯೊಂದಿಗೆ ಮಾತಾಡುತ್ತ ಸೀತೆ,"ರಾಮ ತನ್ನ ಮಾತೆ ಕೌಸಲ್ಯೆಗೆ ಎಷ್ಟು ಗೌರವವನ್ನು ನೀಡ...

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ

ದಟ್ಟವಾದ ಕಾಡಿನಲ್ಲಿ, ಒಂದು ಗರ್ಭವತಿ ಜಿಂಕೆಯು ತನ್ನ ಮಗುವಿಗೆ ಜನ್ಮ ಕೊಡುವುದಕ್ಕೆ ನದಿಯ ತೀರದಲ್ಲಿ ಹುಲ್ಲಿರುವ ಸಮತಟ್ಟಾದ, ಸುರಕ್ಷಿತವಾದ (!) ಸ್ಥಳವನ್ನು ಹುಡುಕಿ ಕೊಂಡಿತ್ತು. ಪ್ರಸವ ವೇದನೆ ಶುರುವ...